ಉಡುಪಿ : ಸಮುದಾಯ ವೈದ್ಯಕೀಯ ವಿಭಾಗ ಕೆ.ಎಂ.ಸಿ. ಮಣಿಪಾಲ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ನ್ಯೂಟ್ರಿಷಿಯನ್ ವಿಭಾಗ, ಮಣಿಪಾಲ ಕಾಲೇಜ್ ಆಫ್ ನರ್ಸಿಂಗ್ ನ ಒಬಿಜಿ ಮತ್ತು ಮನೋವೈದ್ಯಶಾಸ್ತ್ರ ನರ್ಸಿಂಗ್ ವಿಭಾಗ ಮತ್ತು ಮೌಂಟ್ ರೋಸರಿ ಚರ್ಚ್,ಕಲ್ಯಾಣಪುರ, ಸಂತೆಕಟ್ಟೆ, ಕ್ಯಾಥೋಲಿಕ್ ಸಭಾ ಮೌಂಟ್ ರೋಸರಿ, ಐಸಿವೈಎಂ ಮೌಂಟ್ ರೋಸರಿ, ರೋಟರಿ ಕ್ಲಬ್, ಕಲ್ಯಾಣಪುರ ಇವರ ಸಹಯೋಗದೊಂದಿಗೆ ಸಂತೆಕಟ್ಟೆ ಮೌಂಟ್ ರೋಸರಿ ಶಾಲೆಯಲ್ಲಿ ಆರೋಗ್ಯ ತಪಾಸಣೆ ಹಾಗೂ ಯುವಜನತೆಯಲ್ಲಿ ಕ್ಯಾನ್ಸರ್ ತಡೆಗಟ್ಟುವ ಕುರಿತು ಜಾಗೃತಿ ಕಾರ್ಯಕ್ರಮವು ಸಮುದಾಯ ವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಹಾಗೂ ಕೆ.ಎಂ.ಸಿ.ಯ ಸಮುದಾಯ ಆಂಕಾಲಜಿ ಕೇಂದ್ರದ ಸಂಯೋಜಕರು ಮತ್ತು ಸಮುದಾಯ ವೈದ್ಯಕೀಯ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕರಾದ ಡಾ. ರಂಜಿತಾ ಎಸ್. ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೌಂಟ್ ರೋಸರಿ ಚರ್ಚ್ ನ ಪ್ಯಾರಿಷ್ ಪಾದ್ರಿಯವರು ವಹಿಸಿದ್ದರು. ಸಭೆಯಲ್ಲಿ ವಿವಿಧ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು. ಸಮುದಾಯ ವೈದ್ಯಕೀಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಅಖಿಲಾ ಡಿ. ಅವರು ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಕುರಿತು ಮಾಹಿತಿ ನೀಡಿದರು ಹಾಗೂ ವಿವಿಧ ವಿಷಯಗಳ ಕುರಿತು ಡಾ.ಸುವರ್ಣ ಹೆಬ್ಬಾರ್, ಶ್ರೀಮತಿ ಸ್ವೀಟಿ ಫೆರ್ನಾಂಡಿಸ್, ಡಾ. ಮೆಲಿಟಾ ಸೆಲಿನಿ ಮಾಹಿತಿ ನೀಡಿದರು. ಕಾರ್ಯಕ್ರಮ ಆಯೋಜಕರು ಹಾಗೂ ಕೆ.ಎಂ.ಸಿ. ಮಣಿಪಾಲದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಬಿರದಲ್ಲಿ ಒಟ್ಟು 70 ಜನರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.