ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇದರ ಸಮುದಾಯ ಸೇವಾ ಘಟಕ, ಸಂಹಿತಾ ಸಿದ್ಧಾಂತ ಹಾಗೂ ಸಂಸ್ಕೃತ ವಿಭಾಗವು ಆಯುರ್ವೇದ ದಿನಾಚರಣೆಯ ಅಂಗವಾಗಿ ಆಯುರ್ವೇದ ಮಾಹಿತಿ ಕುರಿತಾಗಿ ಕಾಲ್ನಡಿಗೆ ಜಾಥಾ ಹಾಗೂ ಬೀದಿ ನಾಟಕಗಳನ್ನು ಏರ್ಪಡಿಸಿತ್ತು. ಕಾಲೇಜು ಆವರಣದಿಂದ ಪ್ರಾರಂಭಗೊಂಡ ಜಾಥಾ ಪೋಲೀಸ್ ಅಧಿಕಾರಿಗಳ ಸಹಕಾರದೊಂದಿಗೆ ಕಟ್ಟೆಗುಡ್ಡೆ, ಬಲೈಪಾದೆ, ಕಿನ್ನಿಮುಲ್ಕಿ ಮೂಲಕ ಕನ್ನರ್ಪಾಡಿ ಶ್ರೀ ಜಯದುರ್ಗಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯಗೊಂಡಿತು.

ಆಯುರ್ವೇದ ಕುರಿತಾದ ಮಾಹಿತಿಗಳನ್ನೊಳಗೊಂಡ ಸೂಚನಾ ಫಲಕಗಳನ್ನು ಪ್ರದರ್ಶಿಸುತ್ತಾ ಸಾಗಿದ ಸುಮಾರು 125 ವಿದ್ಯಾರ್ಥಿಗಳ ತಂಡ ಸಾರ್ವಜನಿಕರ ಗಮನ ಸೆಳೆಯಿತು. ಬಳಿಕ ಕನ್ನರ್ಪಾಡಿ ದೇವಾಲಯದ ಹೊರ ಆವರಣದಲ್ಲಿ ದಿನಚರ್ಯೆ, ಋತುಚರ್ಯೆಗಳ ಮಹತ್ವವನ್ನು ತಿಳಿಸುವ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು. ಆಯುರ್ವೇದದ ಆಕರ ಗ್ರಂಥವಾದ ಚರಕ ಸಂಹಿತೆಯ ಶ್ಲೋಕಗಳನ್ನು ಈ ಸಂದರ್ಭದಲ್ಲಿ ಪಠಿಸಲಾಯಿತು. ಸಂಹಿತಾ ಸಿದ್ಧಾಂತ ವಿಭಾಗಾಧ್ಯಕ್ಷೆ ಹಾಗೂ ಸಮುದಾಯ ಸೇವಾ ಘಟಕದ ಮುಖ್ಯಸ್ಥೆ ಡಾ. ವಿದ್ಯಾಲಕ್ಷ್ಮೀ ಕೆ. ಕಾರ್ಯಕ್ರಮವನ್ನು ಸಂಘಟಿಸಿದರು.

ವಿಭಾಗದ ಬೋಧಕ ವರ್ಗದವರು, ಎನ್ನೆಸ್ಸೆಸ್, ರೋರ್ಯಾಕ್ಟ್, ರೆಡ್ಕ್ರಾಸ್ ಘಟಕಗಳ ಸದಸ್ಯರು, ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ಆಯುರ್ವೇದದ ಕುರಿತಾದ ಜಾಗೃತಿ ಮೂಡಿಸಲು ಸಹಕರಿಸಿದರು.


