ಉಡುಪಿ: ಕಲೆಯ ಬೆಳವಣಿಗೆಯಲ್ಲಿ ಪ್ರೇಕ್ಷಕರ ಪಾತ್ರ ಅತ್ಯಂತ ಮಹತ್ವದ್ದು. ಶ್ರದ್ಧೆಯಿಂದ, ಮೌನವಾಗಿ ಕೊನೆಯ ತನಕ ಕುಳಿತು ಪ್ರದರ್ಶನ ವೀಕ್ಷಿಸುವುದೇ ಕಲಾವಿದರಿಗೆ ಸಿಗುವ ದೊಡ್ಡ ಪ್ರೋತ್ಸಾಹ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹೇಳಿದರು. ಅವರು ಡಿ.25ರಂದು ಸಿದ್ದಾಪುರ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಉಡುಪಿಯ ಯಕ್ಷಶಿಕ್ಷಣ ಟ್ರಸ್ಟ್ ಹಾಗೂ ಸ್ಥಳೀಯ ಪ್ರದರ್ಶನ ಸಂಘಟನಾ ಸಮಿತಿಯ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಕಿಶೋರ ಯಕ್ಷಗಾನ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ಪ್ರೋತ್ಸಾಹಿಸುವ ಮನೋಭಾವ ಪ್ರೇಕ್ಷಕರಲ್ಲಿ ಇರಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮಕ್ಕೆ ಮುಖ್ಯೋಪಾಧ್ಯಾಯ ಚಂದ್ರ ಕುಲಾಲ ಅಧ್ಯಕ್ಷತೆ ವಹಿಸಿದ್ದರು. ವಿಶ್ವನಾಥ ತುಂಬಿಕಲ್ಲಾಯ, ರಾಜೇಂದ್ರ ಬೆಚ್ಚಳ್ಳಿ, ಶ್ರೀಮತಿ ಶ್ರೀಲತಾ ಶೆಟ್ಟಿ, ನರಸಿಂಹ ಕುಲಾಲ, ಎಚ್. ಗಣೇಶ್ ಶೇಟ್ ಹಾಗೂ ನಾರಾಯಣ ಎಂ. ಹೆಗಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಸ್ತಾವನಾ ಭಾಷಣ ಮಾಡಿದರು. ಪ್ರದರ್ಶನ ಸಂಘಟನಾ ಸಮಿತಿಯ ಸಂಚಾಲಕ ಪ್ರದೀಪ್ ಕುಮಾರ ಹೆಗ್ಡೆ ಹಾಗೂ ಕಾರ್ಯದರ್ಶಿ ಗೋಪಾಲ ಕಾಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಮ್ಸನ್ ಸರ್ಕಾರಿ ಪ್ರೌಢಶಾಲೆ, ಕಂಡ್ಲೂರು ವಿದ್ಯಾರ್ಥಿಗಳಿಂದ ‘ಧರ್ಮಾಂಗದ ದಿಗ್ವಿಜಯ’ ಹಾಗೂ ಇಂದಿರಾಗಾಂಧಿ ವಸತಿ ಶಾಲೆ, ಸಿದ್ದಾಪುರ ವಿದ್ಯಾರ್ಥಿಗಳಿಂದ ‘ರಾಮಾಶ್ವಮೇಧ’ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಂಡವು.



