ಉಡುಪಿ : ಧೈರ್ಯ, ಶೌರ್ಯ ಮತ್ತು ಧೀಮಂತ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದ ಛತ್ರಪತಿ ಶಿವಾಜಿ ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದ ಕೌಶಲ್ಯಗಳು ಅವರ ದೂರದೃಷ್ಟಿ ನಾಯಕತ್ವಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಎಂ.ಎ. ಗಫೂರ್ ಹೇಳಿದರು.

ನಗರದ ಸರಕಾರಿ ಬಾಲಕಿಯರ ಪ್ರೌಢಶಾಲಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕ ವಯಸ್ಸಿನಲ್ಲೇ ಅಸಾಧಾರಣ ನಾಯಕತ್ವ ಗುಣಗಳನ್ನು ಹೊಂದಿದ್ದ ಶಿವಾಜಿ, ತಾಯಿಯ ಪ್ರೇರಣೆಯಿಂದ ಮೌಲ್ಯಾಧಾರಿತ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಮಹಿಳೆಯರ ಮೇಲೆ ಅಪಾರ ಗೌರವವನ್ನು ಹೊಂದಿದ್ದರು. ಅವರ ಆಡಳಿತವು ಪ್ರಗತಿಪರ ನೀತಿ, ದಕ್ಷತೆ ಹಾಗೂ ಜನಪರ ಚಿಂತನೆಯಿಂದ ಗುರುತಿಸಿಕೊಂಡಿತ್ತು ಎಂದರು. ಕರಾವಳಿ ರಕ್ಷಣೆಗೆ ಬಲಿಷ್ಠ ನೌಕಾಪಡೆಯನ್ನು ನಿರ್ಮಿಸಿ, ಜಾತಿ–ಧರ್ಮ ಭೇದವಿಲ್ಲದೆ ಅರ್ಹತೆಯ ಆಧಾರದಲ್ಲಿ ನೇಮಕಾತಿ ನಡೆಸಿದುದು ಅವರ ಸಮಗ್ರ ಆಡಳಿತದ ಉದಾಹರಣೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಿವಾಜಿ ಜಯಂತಿ ಅಂಗವಾಗಿ ಪವರ್ಲಿಫ್ಟಿಂಗ್ನಲ್ಲಿ ಸಾಧನೆಗೈದ ಪ್ರತಿಕ್ಷಾ ನಾಯಕ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಗಣ್ಯರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.



