ಉಡುಪಿ : ಕೆಲಸಕ್ಕೆ ಇದ್ದ ನಂಬಿಕಸ್ತ ನೌಕರನೇ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು ಮಾಲಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಘಟನೆ ಬ್ರಹ್ಮಾವರ ತಾಲೂಕಿನ ಶಿರಿಯಾರದಲ್ಲಿ ಬೆಳಕಿಗೆ ಬಂದಿದೆ. ವಿಶ್ವಂಬರ ಕ್ಯಾಶ್ಯೂ ಇಂಡಸ್ಟ್ರೀಸ್ನಲ್ಲಿ ಸುಮಾರು 1.61 ಕೋಟಿ ರೂ. ಮೌಲ್ಯದ ದಾಸ್ತಾನು ಅಕ್ರಮವಾಗಿ ಮಾರಾಟ ಮಾಡಿ ವಂಚನೆ ನಡೆಸಿರುವ ಆರೋಪದ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರಿಯಾರ ನಿವಾಸಿ ಎಸ್. ಯೋಗೀಶ್ ಅವರು ವಿಶ್ವಂಬರ ಕ್ಯಾಶ್ಯೂ ಇಂಡಸ್ಟ್ರೀಸ್ನ ಮಾಲಕರಾಗಿದ್ದು, ತೆಂಗಿನಕಾಯಿ, ಕೊಬ್ಬರಿ, ಅಡುಗೆ ಎಣ್ಣೆ ಹಾಗೂ ಗೇರುಬೀಜಗಳ ವ್ಯವಹಾರ ನಡೆಸುತ್ತಿದ್ದಾರೆ. ಅವರ ಸಂಸ್ಥೆಯಲ್ಲಿ ಲೆಕ್ಕಪತ್ರ ನಿರ್ವಹಣೆ ಮತ್ತು ದಾಸ್ತಾನು ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ ರತೀಶ್ ತನ್ನ ಸ್ನೇಹಿತರಾದ ರಾಜೇಶ್ ಮತ್ತು ಸುಮಂತ್ ಸೇರಿದಂತೆ ಇತರರೊಂದಿಗೆ ಕೈಜೋಡಿಸಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. 2023ರ ಏಪ್ರಿಲ್ನಿಂದ 2025ರ ಜೂನ್ವರೆಗೆ ಹಂತ ಹಂತವಾಗಿ ಈ ವಂಚನೆ ನಡೆದಿರುವುದು ತನಿಖೆಯಲ್ಲಿ ತಿಳಿದುಬಂದಿದೆ.

ಆರೋಪಿಗಳು 56,01,600 ರೂ. ಮೌಲ್ಯದ 24,896 ಕೆ.ಜಿ. ಕೊಬ್ಬರಿ ಹಾಗೂ 1,05,72,900 ರೂ. ಮೌಲ್ಯದ 1,62,660 ಕೆ.ಜಿ. ತೆಂಗಿನಕಾಯಿಯನ್ನು ಅಕ್ರಮವಾಗಿ ಮಾರಾಟ ಮಾಡಿದ್ದಾರೆ. ಈ ಮಾರಾಟದಿಂದ ಬಂದ ಒಟ್ಟು ಸುಮಾರು 1,61,74,500 ರೂ. ಹಣವನ್ನು ಸಂಸ್ಥೆಯ ಖಾತೆಗೆ ಜಮಾ ಮಾಡದೆ ತಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಂಸ್ಥೆಯ ಲೆಕ್ಕಪತ್ರಗಳಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ಈ ದೊಡ್ಡ ವಂಚನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



