ಬೈಂದೂರು : ಬೈಂದೂರು ವಿಧಾನಸಭಾ ಕ್ಷೇತ್ರದ ಎಲ್ಲೂರು ಹಾಗೂ ಯರುಕೋಣೆಯ ನಡುವಿನ ಕೆಎಸ್ಆರ್ಟಿಸಿ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು, ಇದರ ವಿರುದ್ಧ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಆಕ್ರೋಶ ವ್ಯಕ್ತಪಡಿಸಿದ ಬೆನ್ನಲ್ಲೇ ಬಸ್ ಸಂಚಾರ ಮತ್ತೆ ಆರಂಭಗೊಂಡಿದೆ.

ಈ ಕುರಿತು ಮಾತನಾಡಿರುವ ಶಾಸಕರು, ಕುಂಟು ನೆಪವೊಡ್ಡಿ ಬಸ್ ಸಂಚಾರವನ್ನು ನಿಲ್ಲಿಸಿದ್ದರು. ಇದರಿಂದ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ತುಂಬಾ ಸಮಸ್ಯೆಯಾಗುತ್ತಿತ್ತು. ಬಸ್ ಸ್ಥಗಿತಗೊಳಿಸಿರುವುದರ ಬಗ್ಗೆ ಕೆಎಸ್ಆರ್ಟಿಸಿ ಅಧಿಕಾರಿಗಳೊಂದಿಗೆ ಮಾತಾಡಿ, ಯಾವುದೇ ಕಾರಣಕ್ಕೂ ಬಸ್ ಸಂಚಾರ ಸ್ಥಗಿತ ಮಾಡಬಾರದು ಎಂದು ಸೂಚನೆ ನೀಡಲಾಗಿತ್ತು ಎಂದು ಮಾಹಿತಿ ನೀಡಿದರು. ಶಾಸಕರ ಸೂಚನೆಯ ಬೆನ್ನಲ್ಲೇ ಸರ್ಕಾರಿ ಬಸ್ ಸಂಚಾರ ಮತ್ತೆ ಆರಂಭಗೊಂಡಿದ್ದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.