ಕುಂದಾಪುರ: ಕೇರಳ ಹಾಗೂ ಬೆಂಗಳೂರು ಜೈಲುಗಳಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮುಂಡುಗಾರು ಲತಾ, ಕನ್ಯಾಕುಮಾರಿ ಸೇರಿದಂತೆ ಆರು ಮಂದಿ ಶಂಕಿತ ನಕ್ಸಲ್ವಾದಿಗಳನ್ನು ಶನಿವಾರ ಕಟ್ಟುನಿಟ್ಟಿನ ಭದ್ರತೆಯಲ್ಲಿ ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕುಂದಾಪುರ ಪೊಲೀಸ್ ಉಪವಿಭಾಗದ ಶಂಕರನಾರಾಯಣ ಮತ್ತು ಅಮಾಸೆಬೈಲು ಠಾಣಾ ವ್ಯಾಪ್ತಿಯಲ್ಲಿ ನಕ್ಸಲ್ ಚಟುವಟಿಕೆಗಳು ಹಾಗೂ ಯುಎಪಿಎ ಕಾಯ್ದೆ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿ, ಆರೋಪಿಗಳನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್ ರಹೀಮ್ ಹುಸೇನ್ ಶೇಖ್ ಅವರ ಎದುರು ಪೊಲೀಸರು ಹಾಜರುಪಡಿಸಿದರು.

ಬೆಂಗಳೂರು ಜೈಲಿನಲ್ಲಿ ಇರುವ ಮುಂಡುಗಾರು ಲತಾ ಮತ್ತು ಕನ್ಯಾಕುಮಾರಿ, ತ್ರಿಶೂರ್ ಜೈಲಿನಲ್ಲಿರುವ ಸಾವಿತ್ರಿ ಹಾಗೂ ಮಹೇಶ್ ಅವರನ್ನು ನ್ಯಾಯಾಲಯಕ್ಕೆ ಖುದ್ದಾಗಿ ಕರೆತರಲಾಗಿದ್ದು, ಸುರೇಶ್ ಅವರ ವಿಚಾರಣೆ ವೀಡಿಯೋ ಕಾನ್ಫರೆನ್ಸ್ ಮೂಲಕ ನಡೆಯಿತು. ಜಾಮೀನಿನಲ್ಲಿರುವ ತೊಂಬಟ್ಟು ಲಕ್ಷ್ಮೀ ಸಹ ನ್ಯಾಯಾಲಯಕ್ಕೆ ಹಾಜರಾಗಿದ್ದರು.ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿರುವ ಸಂಬಂಧಿತ ಪ್ರಕರಣಗಳಲ್ಲಿ ದೋಷಾರೋಪಣೆ ದೃಢೀಕರಣ (ಚಾರ್ಜ್ ಫ್ರೇಮ್) ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಮುಂದಿನ ವಿಚಾರಣೆಗೆ ಪ್ರಾಸಿಕ್ಯೂಶನ್ಗೆ ದಿನಾಂಕ ನಿಗದಿಪಡಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಸರ್ಕಾರಿ ಅಭಿಯೋಜಕಿ ಇಂದಿರಾ ನಾಯಕ್ ವಾದ ಮಂಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಕುಂದಾಪುರ ನಗರ ಠಾಣೆ ಪೊಲೀಸ್ ನಿರೀಕ್ಷಕ ಜಯರಾಮ ಗೌಡ ಮತ್ತು ಸಂಬಂಧಿತ ಠಾಣೆಗಳ ಸಿಬ್ಬಂದಿಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ನ್ಯಾಯಾಲಯದ ಪ್ರಕ್ರಿಯೆ ಬಳಿಕ ಎಲ್ಲ ಆರೋಪಿಗಳನ್ನು ಮತ್ತೆ ಸಂಬಂಧಿತ ಜೈಲುಗಳಿಗೆ ಕಳುಹಿಸಲಾಯಿತು.



