ಉಡುಪಿ : ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷೆಯ ಬಡವರ ಕಲ್ಯಾಣ ಯೋಜನೆಯಾದ ವಿಶ್ವಕರ್ಮ ಯೋಜನೆಯ ಮೂಲಕ ಉಡುಪಿ ಜಿಲ್ಲೆಯಲ್ಲಿ 3570 ಫಲಾನುಭವಿಗಳಿಗೆ 35 ಕೋಟಿ ರೂಪಾಯಿ ಸಾಲ ವಿತರಿಸಲಾಗಿದೆ. ಅಲ್ಲದೇ, ಅರ್ಹ ಫಲಾನುಭವಿಗಳಿಗೆ 15,000 ಮೊತ್ತ ಕಾರ್ಮಿಕ ಸಲಕರಣೆ ಕಿಟ್ ವಿತರಿಸಲಾಗಿದೆ, ಇದರಿಂದ ಉಡುಪಿ ಜಿಲ್ಲೆ ವಿಶ್ವಕರ್ಮ ಯೋಜನೆ ಅನುಷ್ಠಾನದಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಬಾರಕೂರು ಪಂಚಾಯತ್ನಲ್ಲಿ ವಿಶ್ವಕರ್ಮ ಫಲಾನುಭವಿಗಳಿಗೆ ಸಾಮಗ್ರಿಗಳ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು.
ದೇಶದಲ್ಲಿ ತಲತಲಾಂತರದಿಂದ ತಮ್ಮ ಸಾಂಪ್ರದಾಯಿಕ ಕುಲ ಕಸುಬುಗಳಿಂದ ಬದುಕುತ್ತಿದ್ದ ಕುಶಲಕರ್ಮಿಗಳಿಗೆ ಅವರ ವೃತ್ತಿಯ ನೈಪುಣ್ಯತೆ ಹೆಚ್ಚಿಸಲು ಸೂಕ್ತ ತರಬೇತಿ ನೀಡಿ ಉಚಿತ ಕಿಟ್ನೊಂದಿಗೆ ಹಂತ ಹಂತವಾಗಿ 3 ಲಕ್ಷ ರೂಪಾಯಿ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಯೋಜನೆ ಇದಾಗಿದ್ದು, ಇದರಿಂದ ಸಾಂಪ್ರದಾಯಿಕ ವೃತ್ತಿಪರರ ಆರ್ಥಿಕ ಅಭಿವೃದ್ಧಿ ಆಗಲಿದೆ ಎಂದು ಸಂಸದ ಕೋಟ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಕ್ಷೇತ್ರದ ಶಾಸಕ ಶ್ರೀ ಕಿರಣ್ ಕೊಡ್ಗಿಯವರು ವಿಶ್ವಕರ್ಮ ಯೋಜನೆಯಂತಹ ಉತ್ತಮ ಯೋಜನೆ ಇಂದು ಸಂಸದರ ಮೂಲಕ ಮನೆ ಮನೆಗೆ ತಲುಪುವುದು ಸ್ವಾಗತಾರ್ಹ ಎಂದು ವಿವರಿಸಿದರು. ಬಾರ್ಕೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಶಾಂತರಾಮ್ ಶೆಟ್ಟಿಯವರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಂದನಾ ಹಾಗೂ ಅಂಚೆ ಇಲಾಖೆಯ ಅಧಿಕಾರಿ ಉಪಸ್ಥಿತರಿದ್ದರು. ಬಾರ್ಕೂರು ಪಂಚಾಯತ್ ಕಾರ್ಯದರ್ಶಿ ಉಷಾ ಶೆಟ್ಟಿ ಸ್ವಾಗತಿಸಿ ಧನ್ಯವಾದ ಇತ್ತರು.