ಉಡುಪಿ : ವಿಮಾ ನೌಕರರ ಸಂಘ, ಉಡುಪಿ ವಿಭಾಗದ 67ನೇ ವಾರ್ಷಿಕ ಸಮ್ಮೇಳನವು ನಗರದ ಎಲ್.ಐ.ಸಿ. ಎಂಪ್ಲಾಯೀಸ್ ಕೋ ಆಪರೇಟಿವ್ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು, ಅಖಿಲ ಭಾರತ ವಿಮಾ ನೌಕರರ ಸಂಘ(ಎ.ಐ.ಐ.ಇ.ಎ)ದ ಮಾಜಿ ಪ್ರಧಾನ ಕಾರ್ಯದರ್ಶಿ ಕೆ. ವೇಣುಗೋಪಾಲ್ ಅವರು ಸಮ್ಮೇಳನದ ಉದ್ಘಾಟನೆಯನ್ನು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಪ್ರಸಕ್ತ ಸನ್ನಿವೇಶದಲ್ಲಿ ಸಾರ್ವಜನಿಕ ರಂಗದ ಎಲ್.ಐ.ಸಿ ಯು ಎದುರಿಸುತ್ತಿರುವ ಹಲವಾರು ಸವಾಲುಗಳನ್ನು ಉಲ್ಲೇಖಿಸಿ, ಸವಾಲುಗಳ ತೀವ್ರತೆಗೆ ತಕ್ಕ ಪ್ರತಿರೋಧವನ್ನು ವ್ಯಕ್ತಪಡಿಸದಿದ್ದಲ್ಲಿ ಮುಂದೆ ಕಾರ್ಮಿಕ ಚಳವಳಿಯು ಅನುಭವಿಸಬಹುದಾದ ಹಿನ್ನಡೆ ಮತ್ತು ನಷ್ಟಗಳ ಬಗ್ಗೆ ಸದಸ್ಯರನ್ನು ಎಚ್ಚರಿಸಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸಿ.ಐ.ಟಿ.ಯು ಉಡುಪಿ ಜಿಲ್ಲಾ ಅಧ್ಯಕ್ಷ ಶಶಿಧರ ಗೊಲ್ಲ ಅವರು ಮಾತನಾಡಿ ಕಾರ್ಮಿಕರಿಗೆ ಪಿಂಚಣಿಯನ್ನು ನಿರಾಕರಿಸುವ ಸರಕಾರದ ನೀತಿಗಳು ಮತ್ತು ಸಾರ್ವಜನಿಕ ರಂಗದ ಎಲ್.ಐ.ಸಿ ಯನ್ನು ಲೂಟಿ ಹೊಡೆಯುತ್ತಿರುವ ಸರಕಾರದ ನಡೆಗಳ ಬಗ್ಗೆ ಪ್ರಸ್ತಾಪಿಸಿ ಈ ನೀತಿಗಳ ವಿರುದ್ಧ ಕಾರ್ಮಿಕ ವರ್ಗ ಒಗ್ಗಟ್ಟಾಗಿ ಕಾರ್ಯತಂತ್ರ ರೂಪಿಸಿ ಹೋರಾಟ ನಡೆಸಲು ಕರೆ ನೀಡಿದರು. ವಿಮಾ ನೌಕರರ ಸಂಘ, ಉಡುಪಿ ವಿಭಾಗದ ಅಧ್ಯಕ್ಷ ಪ್ರಭಾಕರ ಬಿ. ಕುಂದರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಉಪಾಧ್ಯಕ್ಷ ಎಂ. ರವಿ, ದಕ್ಷಿಣ ಮಧ್ಯವಲಯ ವಿಮಾ ನೌಕರರ ಒಕ್ಕೂಟದ ಜೊತೆ ಕಾರ್ಯದರ್ಶಿ ಜಿ. ತಿರುಪತಯ್ಯ, ಉಡುಪಿ ಭಾರತೀಯ ಜೀವ ವಿಮಾ ನಿಗಮ ವಿಭಾಗದ ಹಿರಿಯ ವಿಭಾಗಾಧಿಕಾರಿ ಗಣಪತಿ ಎನ್ ಭಟ್, ಬೆಂಗಳೂರು ಕಾರ್ಮಿಕ ಮತ್ತು ಔದ್ಯೋಗಿಕ ಸಂಬಂಧ ಪ್ರಬಂಧಕ ಎಂ. ಲಕ್ಷ್ಮೀ ನಾರಾಯಣ, ವಿಮಾ ನಿಗಮ ಉದ್ಯೋಗಿಗಳ ಸಂಘ,

1 ರ ಕೋಶಾಧಿಕಾರಿ ಶ್ರೀಮತಿ ಭಾರತಿ ದೇಶಪಾಂಡೆ, ವಿಮಾ ಪಿಂಚಣಿದಾರರ ಸಂಘ, ಉಡುಪಿ ವಿಭಾಗದ ಪ್ರಧಾನ ಕಾರ್ಯದರ್ಶಿ ವಿಠಲ್ಮೂರ್ತಿ ಆಚಾರ್ಯ, ಉಡುಪಿ ಎಲ್.ಐ.ಸಿ. ಅಧಿಕಾರಿಗಳ ಸಂಘ ವಿಭಾಗದ ಪದಾಧಿಕಾರಿ ಕುಶಾಲ್ ಕುಮಾರ್ ಸಮ್ಮೇಳನಕ್ಕೆ ಶುಭ ಹಾರೈಸಿದರು. ಈ ಸಮ್ಮೇಳನದಲ್ಲಿ, ಉಡುಪಿ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ಶಾಖಾ ಘಟಕಗಳಿಂದ ಬಂದ ಪ್ರತಿನಿಧಿಗಳು ಮತ್ತು ವೀಕ್ಷಕರನ್ನು ಒಳಗೊಂಡು ಒಟ್ಟು 250 ಜನ ಸದಸ್ಯರು ಭಾಗವಹಿಸಿದ್ದರು. 2025-26ರ ಸಾಲಿಗೆ ಸಂಘದ ನೂತನ ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಕೆ. ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಕವಿತಾ ಎಸ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.



