ಉಡುಪಿ: ಪ್ರಜಾಪ್ರಭುತ್ವದ ಪವಿತ್ರ ಕೇಂದ್ರವಾಗಿರುವ ವಿಧಾನಸೌಧದಲ್ಲೇ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಾರ್ಕಳ ಶಾಸಕ ಸುನೀಲ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜನರ ಪರವಾಗಿ ಪ್ರಶ್ನಿಸುವ ಪತ್ರಕರ್ತರ ಪ್ರವೇಶಕ್ಕೆ ತಡೆಹಿಡಿಯುವುದು ಎಂದರೆ, ಜನರ ಧ್ವನಿಯನ್ನೇ ಕಟ್ಟಿಹಾಕುವ ಪ್ರಯತ್ನವಾಗಿದೆ. ಪಾರದರ್ಶಕ ಆಡಳಿತಕ್ಕಿಂತ ನಿಯಂತ್ರಣವೇ ಸರ್ಕಾರಕ್ಕೆ ಮುಖ್ಯವಾಗಿದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಟೀಕೆ ಭಯವಲ್ಲ, ಅದು ಆಡಳಿತದ ಬಲವಾಗಿರಬೇಕು. ಆದರೆ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವುದು ದುರ್ಬಲ ಆಡಳಿತದ ಲಕ್ಷಣವಾಗಿದೆ ಎಂದು ಸುನೀಲ್ ಕುಮಾರ್ ಹೇಳಿದ್ದಾರೆ. ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು ಹಾಗೂ ಮುಕ್ತ ಮಾಧ್ಯಮ ಕಾರ್ಯನಿರ್ವಹಣೆಗೆ ಸರ್ಕಾರ ಅವಕಾಶ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಅಧಿಕಾರ ಹಸ್ತಾಂತರ ಸಂಬಂಧಿತ ಸುದ್ದಿಗಳನ್ನು ವ್ಯಾಪಕವಾಗಿ ಬಿತ್ತರಿಸಿದ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳ ಮೇಲೆ ಹಗೆ ಸಾಧಿಸುತ್ತಿದೆಯೇ? ಎಂಬ ಅನುಮಾನವೂ ಮೂಡುತ್ತಿದೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಪ್ರಶ್ನಿಸಿದ್ದಾರೆ.



