ಉಡುಪಿ : ಉಡುಪಿಯ ಯಕ್ಷಗಾನ ಕಲಾರಂಗದ ಅಂಗ ಸಂಸ್ಥೆಯಾದ ವಿದ್ಯಾಪೋಷಕ್ ವತಿಯಿಂದ ಪ್ರಥಮ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗಾಗಿ ಐದು ದಿನಗಳ ‘ಜೀವನ ವಿದ್ಯಾ’ ಸನಿವಾಸ ಶಿಬಿರವನ್ನು ಇಂದು ಐವೈಸಿ ಸಭಾಂಗಣದಲ್ಲಿ ಉದ್ಘಾಟಿಸಲಾಯಿತು. ಕಳೆದ 16 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಶಿಬಿರವನ್ನು ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿದರು.

ಗೀತಾಲೇಖನ ಬರೆದು ಒಪ್ಪಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಆಶೀರ್ವಚನ ನೀಡಿದ ಅವರು, “ಇಂತಹ ಶಿಬಿರಗಳು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಪೂರಕ. ಭಗವದ್ಗೀತೆ ಜೀವನದ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡುವ ಶ್ರೇಷ್ಠ ಗ್ರಂಥ. ಲೌಕಿಕ ವಿದ್ಯೆಯೊಂದಿಗೆ ಆಧ್ಯಾತ್ಮಿಕ ಬೆಳವಣಿಗೆಯೂ ಅಷ್ಟೇ ಮುಖ್ಯ ಎಂದು ಹೇಳಿದರು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ವತಿಯಿಂದ ವಿದ್ಯಾಪೋಷಕ್ನ 1000 ವಿದ್ಯಾರ್ಥಿಗಳಿಗೆ ನೀಡಲಾದ ಉಚಿತ ಆರೋಗ್ಯ ಕಾರ್ಡ್ಗಳನ್ನು ಮಾಹೆಯ ಸಹಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ ಸಾಂಕೇತಿಕವಾಗಿ ವಿತರಿಸಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಮಾಹೆ, ಯಕ್ಷಗಾನ ಕಲಾರಂಗದ ಕಾರ್ಯಕ್ರಮಗಳಿಗೆ ಸದಾ ಕೈಜೋಡಿಸುವುದಾಗಿ ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಶಾಸಕ ಯಶ್ಪಾಲ್ ಎ. ಸುವರ್ಣ ವಹಿಸಿದ್ದರು. ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯರು ಶುಭಾಶಂಸನೆಗೈದರು. ಎಸ್. ವೆಂಕಟೇಶ್, ನಂದಾ ವೆಂಕಟೇಶ್, ಸಿ.ವಿ. ಸಂತೋಷ್, ಭಾಸ್ಕರ ಭಟ್, ಸಿ.ಎಸ್. ರಾವ್, ಪಿ. ಸತೀಶ ರಾವ್, ಶಿಬಿರ ನಿರ್ದೇಶಕ ಗುರುದತ್ ಬಂಟ್ವಾಳಕರ್, ಸಹನಾ ಕಿಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷರು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಳಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು.

ಮಂಗಳೂರಿನ ಪ್ರೊಟೊ ಅಪ್ ಸ್ಕಿಲ್ ನಿರ್ದೇಶನದಲ್ಲಿ ನಡೆಯುವ ಈ ಐದು ದಿನಗಳ ಸನಿವಾಸ ಶಿಬಿರದಲ್ಲಿ ವಿದ್ಯಾಪೋಷಕ್ನ 250 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಆತ್ಮಸ್ಥೈರ್ಯ, ಜೀವನ ಕೌಶಲ, ಆಂಗ್ಲ ಭಾಷಾ ಪ್ರೌಢಿಮೆ ಅಭಿವೃದ್ಧಿಪಡಿಸುವುದರ ಜೊತೆಗೆ ಸಾಧಕ ವ್ಯಕ್ತಿಗಳ ಪರಿಚಯ ಹಾಗೂ ಜೀವನ ಮೌಲ್ಯಗಳ ಬೋಧನೆ ನೀಡಲಾಗುತ್ತದೆ.



