ಉಡುಪಿ : ನಕ್ಸಲ್ ಚಟುವಟಿಕೆಯಲ್ಲಿ ಭಾಗಿ ಪ್ರಕರಣ ಹಿನ್ನಲೆ ಅಮವಾಸೆಬೈಲು, ಕೊಲ್ಲೂರು, ಶಂಕರನಾರಾಯಣದಲ್ಲಿ ಪ್ರಕರಣ ದಾಖಲಾಗಿದ್ದ ಮೂವರು ನಕ್ಸಲರನ್ನು ಕುಂದಾಪುರ ಕೋರ್ಟಿಗೆ ಹಾಜರುಪಡಿಸಲಾಗಿದೆ. ಕೇರಳದ ವಿಯೂರು ಕಾರಾಗೃಹದಲ್ಲಿರುವ ಬಿ.ಜಿ. ಕೃಷ್ಣಮೂರ್ತಿ, ಸಾವಿತ್ರಿ ಅಲಿಯಾಸ್ ಉಷಾ ಹಾಗೂ ಬೆಂಗಳೂರಿನ ಕೇಂದ್ರ ಕಾರಾಗೃಹ ದಲ್ಲಿರುವ ವನಜಾಕ್ಷಿ ಅವರನ್ನು ವಾರಂಟ್ ಪಡೆದು, ನ್ಯಾಯಾಧೀಶರ ಎದುರು ಗುರುವಾರ ಬಿಗಿ ಭದ್ರತೆಯಲ್ಲಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಜಿಲ್ಲೆಯ ಕುಂದಾಪುರ ಉಪ ವಿಭಾಗ ವ್ಯಾಪ್ತಿಯ ಶಂಕರನಾರಾಯಣ, ಕೊಲ್ಲೂರು ಹಾಗೂ ಅಮಾಸೆಬೈಲು ಠಾಣೆ ವ್ಯಾಪ್ತಿಯಲ್ಲಿ ಕೃಷ್ಣಮೂರ್ತಿ ವಿರುದ್ಧ 7, ವನಜಾಕ್ಷಿ ವಿರುದ್ಧ 3 ಹಾಗೂ ಸಾವಿತ್ರಿ ವಿರುದ್ಧ 5 ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗೆ ಆರೋಪಿಗಳು ಖುದ್ದಾಗಿ ಹಾಜರಿಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದ ಹಿನ್ನಲೆಯಲ್ಲಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಕುಂದಾಪುರ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ನೇತೃತ್ವದ ಪೊಲೀಸರ ತಂಡ, ಬೆಂಗಳೂರಿನ ಕೇಂದ್ರ ಕಾರಾಗೃಹ ಹಾಗೂ ಕೇರಳದ ವಿಯೂರು ಕಾರಾಗೃಹದ ಅಧಿಕಾರಿಗಳ ತಂಡದ ಭದ್ರತೆಯಲ್ಲಿ ಆರೋಪಿಗಳನ್ನು ಕರೆತರಲಾಯಿತು. ಈ ಮೂವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 27ರಂದು ವಿಚಾರಣೆ ನಡೆಯಲಿದೆ.



