ಉಡುಪಿ: ಸಿನೆಮಾಗಳ ಗುಣಮಟ್ಟವನ್ನು ಸುಧಾರಿಸಬೇಕಾದರೆ ಮೊದಲು ಪ್ರೇಕ್ಷಕರ ಅಭಿರುಚಿಯಲ್ಲಿ ಬದಲಾವಣೆ ಅಗತ್ಯವಿದೆ. ಇಂದಿನ ಬಹುತೇಕ ಸಿನೆಮಾ ಹಾಗೂ ಧಾರಾವಾಹಿಗಳು ಅವಾಸ್ತವ ಘಟನೆಗಳನ್ನೇ ಚಿತ್ರಿಸುತ್ತಿದ್ದು, ಅವು ಸಮಾಜದ ಚಿಂತನೆಗೆ ಪೂರಕವಾಗುತ್ತಿಲ್ಲ. ಕಾರಂತರ ಕೃತಿಗಳಂತೆ ವಾಸ್ತವವಾದಿ ಚಿಂತನೆಯನ್ನು ಬೆಳೆಸುವ ಸಿನೆಮಾಗಳನ್ನು ನೋಡುವ ಅಭಿರುಚಿ ಪ್ರೇಕ್ಷಕರಲ್ಲಿ ಬೆಳೆಬೇಕು ಎಂದು ಖ್ಯಾತ ನಿರ್ದೇಶಕ ಪಿ. ಶೇಷಾದ್ರಿ ಹೇಳಿದರು.

ಅವರು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ ಗಂಗೂಬಾಯಿ ಹಾನಗಲ್ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್, ಹಾಗೂ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಹ್ಯುಮಾನಿಟೀಸ್ ಅಂಡ್ ಆರ್ಟ್ಸ್ ವಿಭಾಗದ ಸಹಯೋಗದಲ್ಲಿ ನಡೆದ ಕಾರಂತರ ಚಲನಚಿತ್ರ ವೀಕ್ಷಣೆ ಹಾಗೂ ಸಂವಾದ ಕಾರ್ಯಕ್ರಮದ ಸಮಾರೋಪ ಭಾಷಣದಲ್ಲಿ ಮಾತನಾಡಿದರು. ಈ ರೀತಿಯ ಚಲನಚಿತ್ರ ಕಾರ್ಯಕ್ರಮಗಳು ವಾಸ್ತವದ ಬದುಕಿನ ಸಂಕೀರ್ಣತೆಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತವೆ. ಇವು ಸಮಾಜಮುಖಿ ಚಿಂತನೆಗೆ ದಾರಿ ಮಾಡಿಕೊಡುತ್ತವೆ ಎಂದು ಶೇಷಾದ್ರಿ ಅಭಿಪ್ರಾಯಪಟ್ಟರು.ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡಿ, ಕಾಲೇಜುಗಳಲ್ಲಿ ಸಿನೆಮಾ ಕ್ಲಬ್ಗಳನ್ನು ಸ್ಥಾಪಿಸಿ ವಿರಾಮ ವೇಳೆಯಲ್ಲಿ ಕಲಾತ್ಮಕ ಹಾಗೂ ಅರ್ಥಪೂರ್ಣ ಸಿನೆಮಾಗಳನ್ನು ವೀಕ್ಷಿಸುವ ಅವಕಾಶ ಕಲ್ಪಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಎಕ್ಕಾರು, ಇಂತಹ ಚಿಂತನಾ ಪ್ರಧಾನ ಕಾರ್ಯಕ್ರಮಗಳನ್ನು ಮುಂದೆಯೂ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಟ್ರಸ್ಟ್ನ ಸದಸ್ಯ ಕಾರ್ಯದರ್ಶಿ ಪೂರ್ಣಿಮಾ ಉಪಸ್ಥಿತರಿದ್ದರು. ಮಾಹೆಯ ಮಾನವಿಕ ವಿಭಾಗದ ಮುಖ್ಯಸ್ಥೆ ಗಾಯತ್ರಿ ಪ್ರಭು ಸ್ವಾಗತಿಸಿದರು. ಭಾಷಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಪೃಥ್ವಿರಾಜ್ ಕವತ್ತಾರು ಕಾರ್ಯಕ್ರಮದ ವಿವರ ನೀಡಿದರು. ಸೌಮ್ಯ ಕಾರ್ಯಕ್ರಮ ನಿರ್ವಹಿಸಿ, ಯಜುಷಾ ವಂದಿಸಿದರು.



