ಉಡುಪಿ : ಸುಮಾರು ಒಂದು ತಿಂಗಳ ಹಿಂದೆ ಉಡುಪಿ ಪರಿಸರದಲ್ಲಿ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿಯವರಿಂದ ವಿವಿಧ ದಿನಗಳಲ್ಲಿ ರಕ್ಷಿಸಲ್ಪಟ್ಟ ಮೂವರು ಅಪರಿಚಿತ ವ್ಯಕ್ತಿಗಳು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದರು. ಸಂಬಂಧಿಕರು ಪತ್ತೆಯಾಗದ ಹಿನ್ನೆಲೆ ಬೀಡಿನಗುಡ್ಡೆಯಲ್ಲಿ ವಿಶು ಶೆಟ್ಟಿಯವರ ನೇತೃತ್ವದಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ರಕ್ಷಿಸಲ್ಪಟ್ಟವರಲ್ಲಿ ಕುಟ್ಟಮ್ (45) ಹಾಗೂ ಮತ್ತೊಬ್ಬ ಅಪರಿಚಿತ ವ್ಯಕ್ತಿ (40) ಉಡುಪಿ ಮತ್ತು ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದರು. ಮತ್ತೊಬ್ಬ ಹಿರಿಯ ವ್ಯಕ್ತಿಯನ್ನು ಉಡುಪಿಯಿಂದ ರಕ್ಷಿಸಿ ಹೊಸಬೆಳಕು ಆಶ್ರಮಕ್ಕೆ ದಾಖಲಿಸಲಾಗಿದ್ದು, ಅಲ್ಲಿ ಅವರು ನಿಧನ ಹೊಂದಿದ್ದರು.

ಮೃತದೇಹಗಳನ್ನು ಸಂಬಂಧಿಕರ ಪತ್ತೆಗಾಗಿ ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು. ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟಣೆ ನೀಡಲಾಗಿದ್ದರೂ ವಾರಸುದಾರರು ಪತ್ತೆಯಾಗಲಿಲ್ಲ. ಹೀಗಾಗಿ ಮಲ್ಪೆ ಹಾಗೂ ಉಡುಪಿ ನಗರ ಠಾಣಾ ಪೊಲೀಸರ ಸಹಕಾರದೊಂದಿಗೆ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಅಂತ್ಯಕ್ರಿಯೆಗೆ ಅಂಬಲಪಾಡಿಯ ಕೃಷ್ಣರು ಜೆಸಿಬಿ ಒದಗಿಸಿ ಸಹಕರಿಸಿದರು. ಹೊಸಬೆಳಕು ಆಶ್ರಮದ ಮುಖ್ಯಸ್ಥ ತನುಲ, ರಾಮದಾಸ್ ಪಾಲನ್ (ಉದ್ಯಾವರ) ಹಾಗೂ ಶಾಜಿ ಆಂಬುಲೆನ್ಸ್ ಸೇವೆ ನೆರವು ನೀಡಿದರು.



