ಉಡುಪಿ : ವಡಭಾಂಡೇಶ್ವರ ಶ್ರೀ ಬಲರಾಮ ದೇವಾಲಯದಲ್ಲಿ ವಾರ್ಷಿಕ ಲಕ್ಷ ದೀಪೋತ್ಸವ ಭಾನುವಾರ ಸಂಜೆ ಭಕ್ತಿಭಾವ ಮತ್ತು ವೈಭವದಿಂದ ನೆರವೇರಿತು.

ದೇವಾಲಯ ಮತ್ತು ದೇವರನ್ನು ಹೂವುಗಳಿಂದ ಸಿಂಗಾರಿಸಿ ದೀಪೋತ್ಸವದ ಸನ್ನಿವೇಶವನ್ನು ಅದ್ಭುತವಾಗಿ ಅಲಂಕರಿಸಲಾಯಿತು. ತೀರ್ಥ ಮಂಟಪದಲ್ಲಿ ದೇವರಿಗೆ ಆರತಿಯನ್ನು ಬೆಳಗುವುದರ ಮೂಲಕ ದೀಪೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ದೇವಾಲಯದ ಸುತ್ತಲೂ ಭಕ್ತರು ದೀಪಗಳನ್ನು ಬೆಳಗಿದರು.

ವಾದ್ಯಸೇವೆ, ನರ್ತನಬಲಿ ಸೇರಿದಂತೆ ದೇವಾಲಯದ ಪುಷ್ಕರಣಿಯಲ್ಲಿ ನಡೆದ ವೈಭವದ ತೆಪ್ಪೋತ್ಸವ ಭಕ್ತರ ಮನಸೆಳೆಯಿತು. ಬಳಿಕ ಸುಡುಮದ್ದು ಪ್ರದರ್ಶನ ಮತ್ತು ಓಲಗ ಮಂಟಪ ಪೂಜೆಯು ನಡೆಯಿತು.

ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮುಖ್ಯಸ್ಥರಾದ ಶ್ರೀನಿವಾಸ ಭಟ್, ಶಾಚಾರ್ಯ ಕಡೆಕಾರ್, ಶ್ರೀವರ ಕಡೆಕಾರ್, ಶಶಿಧರ್ ಅಮೀನ್ ಹಾಗೂ ಅನೇಕರಾದ ಭಕ್ತರು ಉಪಸ್ಥಿತರಿದ್ದರು.



