ಉಡುಪಿ: “ವಕ್ಫ್ ಉಳಿಸಿ – ಸಂವಿಧಾನ ರಕ್ಷಿಸಿ” ಹೋರಾಟ ಸಮಿತಿ ವತಿಯಿಂದ ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆ 2025 ವಿರುದ್ದ ಮೇ.13 ರಂದು ನಗರದ ಮಿಷನ್ ಕಂಪೌಂಡಿನ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಗುರುವಾರ ಸಮಿತಿಯ ಸದಸ್ಯ ಮುಷ್ತಾಕ್ ಹೆನ್ನಾಬೈಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಾತ್ಯಾತೀತ ಮನೋಭಾವದ ಸಂವಿಧಾನ ಪ್ರೇಮಿ ಸಮಾನ ಮನಸ್ಕ ಸಂಘಟನೆ, ರಾಜಕೀಯ ಪಕ್ಷ, ಚಿಂತಕರು & ಹೋರಾಟಗಾರರು ಒಂದುಗೂಡಿ ಹಲವಾರು ಪೂರ್ವಭಾವಿ ಸಭೆಗಳನ್ನು ನಡೆಸಿ ತಯಾರಿ ಮತ್ತು ಪ್ರಚಾರವನ್ನು ಮಾಡಲಾಗಿತ್ತು. ಎಂದರು.
ಜಿಲ್ಲೆಯ ಎಲ್ಲಾ ಭಾಗಗಳಿಂದಲೂ ದೊಡ್ಡ ಸಂಖ್ಯೆಯಲ್ಲಿ ಕೇಂದ್ರ ಸರಕಾರದ ಈ ಕಾಯ್ದೆಯ ವಿರುದ್ದ ಬೃಹತ್ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇತ್ತು. ಆದರೆ ಪೆಹಲ್ಗಾಮ್ನಲ್ಲಿ ಉಗ್ರರು ನಡೆಸಿದ ನರಮೇಧಕ್ಕೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ ದಾಳಿ ಯಶಸ್ವಿಯಾಗಿದೆ. ಈ ವೇಳೆ ದೇಶದ ಸೈನ್ಯಕ್ಕೆ ನೈತಿಕ ಬಲ ನೀಡುವುದು ನಮ್ಮೆಲ್ಲರ ಕರ್ತವ್ಯ. ಹೀಗಾಗಿ ಸರಕಾರದ ಪರ ನಮ್ಮ ಬೆಂಬಲವನ್ನು ಸೂಚಿಸಿ, ಪ್ರತಿಭಟನೆಯನ್ನು ಮುಂದೂಡಲು ನಿರ್ಧರಿಸಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಸದಸ್ಯರಾದ ಮೊಹಮ್ಮದ್ ಇದ್ರೀಸ್ ಹೂಡೆ, ಇಸ್ಮಾಯಿಲ್ ಹುಸೇನ್, ಬಿಎಸ್ಎಫ್ ರಫೀಕ್, ರಮೇಶ್ ಕಾಂಚನ್, ಸುಂದರ್ ಮಾಸ್ತರ್, ನಾಗೇಶ್ ಉಪಸ್ಥಿತರಿದ್ದರು.