ಉಡುಪಿ: ಉಡುಪಿ ವಕೀಲರ ಸಂಘದ ಸ್ಥಳಾಂತರಿತ ಕಟ್ಟಡವನ್ನು ಜಿಲ್ಲಾ ನ್ಯಾಯಾಲಯದ ನಾಲ್ಕನೇ ಮಹಡಿಯಲ್ಲಿ ಶುಕ್ರವಾರ ಹ್ಯೆಕೋರ್ಟ್ ನ್ಯಾಯಮೂರ್ತಿ ಹಾಗು ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ನ್ಯಾ| ಇ.ಎಸ್.ಇಂದಿರೇಶ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ನ್ಯಾಯವಾದಿಗಳಿಗೆ ಇರುವಷ್ಟು ಸ್ವಾತಂತ್ರ್ಯ ಯಾವ ವೃತ್ತಿಯಲ್ಲಿಯೂ ಇಲ್ಲ. ನ್ಯಾಯವಾದಿಗಳು ಉತ್ತಮವಾಗಿ ವಾದಿಸಿದರೆ ಉತ್ತಮ ತೀರ್ಪು ಬರಲು ಸಾಧ್ಯವಿದೆ. ಕಾನೂನು ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ನ್ಯಾಯಧೀಶರು, ಎಲ್ಲಾ ವಿವಿಧ ಕಾನೂನನ್ನು ಅರಗಿಸಿಕೊಂಡಿರುವುದಿಲ್ಲ. ದಿನನಿತ್ಯ ಹೊಸ ವಿಚಾರಗಳನ್ನು ತಿಳಿದುಕೊಳ್ಳಬೇಕು. ವಕೀಲರು, ನ್ಯಾಯಧೀಶರು ಪ್ರತಿದಿನವೂ ವಿದ್ಯಾರ್ಥಿಗಳು ಎಂದರು.
ವಕೀಲರ ಸಂಘಕ್ಕೆ ಉತ್ತಮ ಕಟ್ಟಡ ಹಾಗೂ ಗ್ರಂಥಾಲಯಗಳು ಅತ್ಯಗತ್ಯ. ಮನೆಯಲ್ಲಿ ದೇವರ ಮನೆ ಚೆನ್ನಾಗಿದ್ದರೇ, ಆ ಮನೆಯ ಸಂಸ್ಕಾರವನ್ನು ಅದು ಪ್ರತಿಬಿಂಬಿಸುವಂತೆ, ವಕೀಲರ ಸಂಘದಲ್ಲಿ ಉತ್ತಮ ವ್ಯವಸ್ಥೆಗಳಿದ್ದರೇ, ಆ ಸಂಘದ ಔನತ್ಯಯನ್ನು ತಿಳಿಯಬಹುದು. ಉಡುಪಿ ಜಿಲ್ಲೆಯ ಎಲ್ಲಾ ತಾಲೂಕು ನ್ಯಾಯಾಲಯಗಳಲ್ಲಿನ ಮಧ್ಯಸ್ಥಿಕೆ ಕೇಂದ್ರದಲ್ಲಿ ಹೊಸ ಮಧ್ಯಸ್ಥಿಕೆದಾರರನ್ನು ಶೀಘ್ರವಾಗಿ ನೇಮಕಾತಿ ಮಾಡಲಾಗುವುದು. ಅವರಿಗೆ 40 ಗಂಟೆ ತರಬೇತಿ ನೀಡಲಾಗುತ್ತದೆ ಎಂದರು.ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಸುನಿಲ್ ಟಿ.ಮಸರಡ್ಡಿ ಉಪಸ್ಥಿತರಿದ್ದರು.
ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್.ವಂದಿಸಿದರು. ನ್ಯಾಯವಾದಿಗಳಾದ ರೂಪಶ್ರೀ ಪ್ರಾರ್ಥಿಸಿ, ಸಹನಾ ಕುಂದರ್ ನಿರೂಪಿಸಿದರು.