ಉಡುಪಿ : ದೇಶದ ಕರಾವಳಿ ಭದ್ರತೆ ಹಾಗೂ ದೇಶಭಕ್ತಿಯ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ವತಿಯಿಂದ ಆಯೋಜಿಸಲಾದ ವಂದೇ ಮಾತರಂ ಕೋಸ್ಟಲ್ ಸೈಕ್ಲೋಥಾನ್–2026 ಒಂದು ಬೃಹತ್ ರಾಷ್ಟ್ರೀಯ ಜಾಗೃತಿ ಅಭಿಯಾನವಾಗಿದೆ ಎಂದು ಸಿಐಎಸ್ಎಫ್ ಉಪ ಕಮಾಂಡೆಂಟ್ ಸಂದೀಪ್ ಚಕ್ರವರ್ತಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಬ್ರಹ್ಮಾವರದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುರಕ್ಷಿತ ತಟ್, ಸಮೃದ್ಧ ಭಾರತ ಎಂಬ ಆಶಯದೊಂದಿಗೆ ಈ ಸೈಕ್ಲೋಥಾನ್ ಜನವರಿ 28ರಿಂದ ಫೆಬ್ರವರಿ 22ರವರೆಗೆ ನಡೆಯುತ್ತಿದ್ದು, ಗುಜರಾತ್ನ ಲಖ್ಪತ್ನಿಂದ ಪಶ್ಚಿಮ ಬಂಗಾಳದ ಬಕ್ಖಾಲಿವರೆಗೆ 6,553 ಕಿ.ಮೀ. ದೂರವನ್ನು ಸೈಕಲ್ ಮೂಲಕ ಕ್ರಮಿಸಲಾಗುತ್ತಿದೆ ಎಂದರು.

ಈ 25 ದಿನಗಳ ಸೈಕ್ಲೋಥಾನ್ನಲ್ಲಿ 130 ಸೈಕ್ಲಿಸ್ಟ್ಗಳು ಭಾಗವಹಿಸಿದ್ದು, ಅವರಲ್ಲಿ 65 ಮಂದಿ ಮಹಿಳೆಯರಾಗಿದ್ದಾರೆ. ಇದರ ಮೂಲಕ ಕರಾವಳಿ ಭದ್ರತೆ ಜೊತೆಗೆ ಮಹಿಳಾ ಸಬಲೀಕರಣದ ಸಂದೇಶವನ್ನೂ ಸಮಾಜಕ್ಕೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಕರಾವಳಿ ಪ್ರದೇಶದ ಜನರೊಂದಿಗೆ ನೇರ ಸಂವಾದ ನಡೆಸಿ ಕಡಲ ಭದ್ರತೆ ಕುರಿತು ಮಾಹಿತಿ ನೀಡುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.

ಸೈಕ್ಲೋಥಾನ್ ರ್ಯಾಲಿಯು ತ್ರಾಸಿ ಮೂಲಕ ಪ್ರವೇಶಿಸಿ ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾಪು ಹಾಗೂ ಹೆಜಮಾಡಿ ಮಾರ್ಗವಾಗಿ ಮಂಗಳೂರಿಗೆ ತೆರಳಿತು. ವಿವಿಧ ಕಡೆಗಳಲ್ಲಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯರೊಂದಿಗೆ ಸಂವಾದ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದಲ್ಲಿ ಸಿಐಎಸ್ಎಫ್ ಅಧಿಕಾರಿಗಳು, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳು, ಸ್ಥಳೀಯ ಕ್ರೀಡಾ ಸಂಘಟನೆಗಳ ಪದಾಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.



