ಉಡುಪಿ : ಉಡುಪಿ ನಗರದ ಹೊರವಲಯದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತಲೆಗೆ ಗಾಯಗೊಂಡು ಮನಸ್ಸಿನ ಸ್ಥಿಮಿತ ಕಳೆದುಕೊಂಡಿದ್ದ ರಕ್ಷಣಾ ಇಲಾಖೆ ಸಿಬ್ಬಂದಿಯನ್ನು ಸಾರ್ವಜನಿಕರ ಸಹಕಾರದಿಂದ ರಕ್ಷಿಸಿ ಚಿಕಿತ್ಸೆ ಒದಗಿಸಿದ ಬಳಿಕ ಇದೀಗ ಸಂಬಂಧಿಕರ ವಶಕ್ಕೆ ಹಸ್ತಾಂತರಿಸಿದ ಘಟನೆ ನಡೆದಿದೆ.

ಹೊರ ರಾಜ್ಯ ಮೂಲದ ರಕ್ಷಣಾ ಇಲಾಖೆ ಸಿಬ್ಬಂದಿ ವಿಜಯ್ (38) ಅವರು ರಜೆಯಲ್ಲಿ ತಮ್ಮ ಊರಿಗೆ ತೆರಳುವ ಸಂದರ್ಭದಲ್ಲಿ ರೈಲಿನಲ್ಲಿ ಅಕಸ್ಮಾತ್ ತಲೆಗೆ ತಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆ ಪಡೆಯುವ ಉದ್ದೇಶದಿಂದ ತುರ್ತು ನಿಲ್ದಾಣವೊಂದರಲ್ಲಿ ರೈಲಿನಿಂದ ಇಳಿದ ವಿಜಯ್, ಗಾಯದಿಂದ ಉಂಟಾದ ರಕ್ತಸ್ರಾವ ಮತ್ತು ಮಾನಸಿಕ ಆಘಾತದಿಂದ ತಮ್ಮ ಸ್ಥಿಮಿತ ಕಳೆದುಕೊಂಡು ಉಡುಪಿ ಕಡೆಗೆ ಹೊರಡುವ ಬಸ್ಸನ್ನು ಹತ್ತಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅಂಬಲಪಾಡಿ ಅವರು ಸಾರ್ವಜನಿಕರ ಸಹಾಯದೊಂದಿಗೆ ವ್ಯಕ್ತಿಯನ್ನು ಪತ್ತೆ ಹಚ್ಚಿ ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದ್ದಾರೆ. ರಾತ್ರಿ ವೇಳೆಗೆ ವಿಜಯ್ ಅವರ ವಿವರಗಳು ಲಭಿಸಿದ್ದು, ಚಿಕಿತ್ಸೆ ಬಳಿಕ ಅವರು ಸಂಪೂರ್ಣವಾಗಿ ಸ್ಪಂದಿಸಲು ಆರಂಭಿಸಿದ್ದಾರೆ. ನಂತರ ಹೊರರಾಜ್ಯದ ಸಂಬಂಧಿಕರನ್ನು ಪತ್ತೆ ಹಚ್ಚಲಾಗಿದ್ದು, ಅವರು ಉಡುಪಿಗೆ ಆಗಮಿಸಿದ್ದಾರೆ. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿದ ಬಳಿಕ ವಿಶು ಶೆಟ್ಟಿ ಅವರ ಮುಖಾಂತರ ಗಾಯಗೊಂಡ ಸಿಬ್ಬಂದಿಯನ್ನು ಸಂಬಂಧಿಕರ ವಶಕ್ಕೆ ಹಸ್ತಾಂತರಿಸಿ ಊರಿಗೆ ಕಳುಹಿಸಲಾಗಿದೆ.



