Friday, October 24, 2025

spot_img

ರಾಷ್ಟ್ರೀಕೃತ ಬ್ಯಾಂಕುಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು : ಸಂಸದ ಕೋಟ

ಉಡುಪಿ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಷ್ಟ್ರೀಕೃತ ಬ್ಯಾಂಕುಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವುದ ಜೊತೆಗೆ ಜನಸ್ನೇಹಿಯಾಗಬೇಕು ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಕರೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಡಿ ಆರ್ಥಿಕ ನೆರವು ಸೌಲಭ್ಯಗಳು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಸಿಗುವಂತಾಗಬೇಕು. ಪ್ರಧಾನಮಂತ್ರಿ ಜೀವನಜ್ಯೋತಿ, ಸುರಕ್ಷಾ ಭೀಮಾ ಯೋಜನೆಯಡಿ ಹೆಚ್ಚಿನ ಫಲಾನುಭವಿಗಳು ಲಾಭ ಪಡೆಯುವಂತಾಗಬೇಕು. ಶೈಕ್ಷಣಿಕ ಯೋಜನೆಗಳಿಗೆ ಸಾಲ ನೀಡುವ ನಿಯಮಗಳು ಸರಳೀಕರಣ ಆಗಬೇಕು ಎಂದ ಅವರು, ಸರಕಾರದ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಆ ಯೋಜನೆಯ ಲಾಭಗಳು ಸಿಗಬೇಕು. ಇಲಾಖೆಯಿಂದ ಆಯ್ಕೆ ಆಗಿ ಬಂದ ಅರ್ಜಿಗಳನ್ನು ತಿರಸ್ಕೃತವಾಗದಂತೆ ನೋಡಿಕೊಳ್ಳಬೇಕು. ಆರ್ಥಿಕ ನೆರವು ನೀಡುವಾಗ ಯಾವುದೇ ಕುಂದು ಕೊರತೆಗಳು ಎದುರಾದಲ್ಲಿ ಅದನ್ನು ಸರಿಪಡಿಸಿ, ನಿಗಧಿತ ಗುರಿ ಸಾಧನೆಗೆ ಮುಂದಾಗಬೇಕು ಎಂದರು.

ರಾಷ್ಟ್ರೀಕೃತ ಬ್ಯಾಂಕುಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಗ್ರಾಹಕರೊಂದಿಗೆ ವ್ಯವಹರಿಸುವಾಗ ಕನ್ನಡ ಭಾಷೆಯನ್ನು ಬಳಕೆ ಮಾಡಬೇಕು. ಒಂದೊಮ್ಮೆ ಅಧಿಕಾರಿಗಳು ವ್ಯವಹರಿಸಲು ಅನಾನುಕೂಲವಾದಾಗ ಸ್ಥಳೀಯ ವ್ಯಕ್ತಿಗಳನ್ನು ನಿಯೋಜಿಸಬೇಕು ಎಂದ ಅವರು, ಪಿ.ಎಂ.ಮುದ್ರಾ, ಸ್ಟಾರ್ಟ್ಅಪ್ ಯೋಜನೆಗಳಿಗೆ ಹೆಚ್ಚು ಆದ್ಯತೆ ನೀಡಿದ್ದಲ್ಲಿ ಜಿಲ್ಲೆಯಲ್ಲಿ ಸ್ವ-ಉದ್ಯೋಗ ಹೊಂದುವವರ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಆರ್ಥಿಕ ಪ್ರಗತಿ ಹೆಚ್ಚಾಗಲಿದೆ ಎಂದರು. ಪಿ.ಎಂ.ವಿಶ್ವಕರ್ಮ ಯೋಜನೆಯಡಿ ಸಾಲ ವಿತರಣೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಇದನ್ನು ಮೊದಲನೇ ಸ್ಥಾನಕ್ಕೆ ತರುವಲ್ಲಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದ ಅವರು, ಐದಕ್ಕೂ ಹೆಚ್ಚು ರಾಷ್ಟ್ರೀಕೃತಬ್ಯಾಂಕುಗಳು ಜಿಲ್ಲೆಯವೇ ಆಗಿವೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಜಿಲ್ಲೆಯಲ್ಲಿ ಆದ್ಯತಾ ವಲಯಕ್ಕೆ ಆರ್.ಬಿ.ಐ ನಿಯಮಾನುಸಾರ ನೀಡುವ ಆರ್ಥಿಕ ನೆರವು ಪ್ರಮಾಣ ಹೆಚ್ಚಾಗಬೇಕು. ಸಾಮಾಜಿಕ ಜವಾಬ್ದಾರಿಯನ್ನು ಅರಿತು ಬ್ಯಾಂಕುಗಳು ನಾಗರಿಕರೊಂದಿಗೆ ವ್ಯವರಿಸಬೇಕು. ಎಲ್ಲಾ ಬ್ಯಾಂಕಿನ ಅಧಿಕಾರಿಗಳು ಬ್ಯಾಂಕುಗಳಿಗೆ ನೀಡಲಾದ ವೈಯಕ್ತಿಕ ಗುರಿಗಳನ್ನು ಪ್ರತಿಶತಃ ನೂರರಷ್ಟು ಪ್ರಗತಿ ಸಾಧಿಸಬೇಕು ಎಂದರು.
ಜಿಲ್ಲೆಯಲ್ಲಿ ಸ್ವ-ಸಹಾಯ ಗುಂಪಿನ ಮಹಿಳೆಯರು ಸ್ವ-ಉದ್ಯೋಗ ಪ್ರಾರಂಭಿಸಲು ಆರ್ಥಿಕ ನೆರವಿಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ ಅವರನ್ನು ಸತಾಯಿಸದೇ, ಯೋಜನೆಗಳ ಹಾಗೂ ದಾಖಲಾತಿ ನಿರ್ವಹಣೆ ಬಗ್ಗೆ ಮಾಹಿತಿ ನೀಡಿ, ಯೋಜನೆಯ ಫಲಾನುಭವಿಗಳನ್ನಾಗಿಸುವುದರ ಜೊತೆಗೆ ಯಾವುದೇ ಅರ್ಜಿಗಳು ತಿರಸ್ಕೃತಗೊಳ್ಳದಂತೆ ನೋಡಿಕೊಳ್ಳಬೇಕು ಎಂದ ಅವರು, ಆಯ್ಕೆಯಾದ ಎಲ್ಲಾ ಫಲಾನುಭವಿಗಳಿಗೂ ಯೋಜನೆಯ ಲಾಭ ದೊರೆಯುವಂತಾಗಬೇಕು ಎಂದರು. ಕೃಷಿ, ಶಿಕ್ಷಣ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಆರ್ಥಿಕ ನೆರವು ನೀಡುವ ಸಂದರ್ಭದಲ್ಲಿ ಮುದ್ರಾಂಕ ಶುಲ್ಕವು ವಿನಾಯಿತಿ ಇದೆ. ಆದರೂ ಸಹ ಜಿಲ್ಲೆಯ ಕೆಲವು ಬ್ಯಾಂಕುಗಳಲ್ಲಿ ಮುದ್ರಾಂಕ ಶುಲ್ಕವನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ಮುಂದಿನ ದಿನಗಳಲ್ಲಿ ಪುನರಾವರ್ತನೆಯಾದಲ್ಲಿ ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು ಸೋಷಿಯಲ್ ಇನ್ಫ್ರಾಸ್ಟ್ರಕ್ಚರ್ ಗೆ ರೆನೆವಬಲ್ ಎನರ್ಜಿ, ಫಿಷರೀಸ್ ಫಾರ್ಮ್, ಸ್ವಯಂ ಉದ್ಯೋಗ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲು ನಿಗಧಿಪಡಿಸಿರುವ 12 ಲಕ್ಷ ರೂ. ಮೊತ್ತದ ಗುರಿಯನ್ನು ಸಾಧಿಸಿಲ್ಲ. ಬ್ಯಾಂಕುಗಳಿಗೆ ಸೋಷಿಯಲ್ ರೆನ್ಸ್ಪಾನ್ಸಿಬಿಲಿಟಿ ಇರುತ್ತದೆ. ಇದನ್ನು ಮನಗಂಡು ತಮ್ಮ ಕಾರ್ಯನಿರ್ವಹಿಸಬೇಕು ಎಂದರು.

ಉಡುಪಿ ಕೆನರಾ ಬ್ಯಾಂಕ್ ಆರ್.ಓ-2 ಎ.ಜಿ.ಎಂ ಮತ್ತು ರೀಜನಲ್ ಮ್ಯಾನೆಜರ್ ತದಿನಾಡ ಶ್ರೀನಾಗ ಪೂರ್ಣಾನಂದ ಮಾತನಾಡಿ, ಜಿಲ್ಲೆಯಲ್ಲಿ 2024-25 ನೇ ಸಾಲಿನಲ್ಲಿ ಕೃಷಿ ವಲಯಕ್ಕೆ 4439.30 ನಿಗಧಿತ ಗುರಿಗೆ 3830.27 ಗುರಿ ಸಾಧಿಸಿ ಶೇ. 86.28, ಎಂ.ಎಸ್.ಎಂ.ಇ ವಲಯಕ್ಕೆ 3425.34 ಗುರಿ ನಿಗಧಿಪಡಿಸಲಾಗಿದ್ದು, 3119.68 ಗುರಿ ಸಾಧಿಸಿ ಶೇ. 91.08 ರಷ್ಟು, ಶಿಕ್ಷಣ ವಲಯಕ್ಕೆ 138.98 ನಿಗಧಿತ ಗುರಿಗೆ 132.73 ಸಾಧನೆ ಮಾಡಿ ಶೇ. 95.50 ರಷ್ಟು, ವಸತಿ ಕ್ಷೇತ್ರಗಳಿಗೆ 369.35 ನಿಗಧಿತ ಗುರಿಗೆ 255.02 ಗುರಿ ಸಾಧಿಸಿ ಶೇ. 85.37 ರಷ್ಟು ಹಾಗೂ ಆದ್ಯತೇತರ ವಲಯಗಳಿಗೆ 3844.18 ನಿಗಧಿತ ಗುರಿಗೆ, 6039.64 ಗುರಿ ಸಾಧಿಸಿ ಶೇ. 157.11 ರಷ್ಟು ಸಾಧನೆ ಮಾಡಲಾಗಿದೆ ಎಂದರು.
ಕಳೆದ ವರ್ಷಕ್ಕೆ ಹೋಲಿಸಿದ್ದಲ್ಲಿ ಬ್ಯಾಂಕಿಂಗ್ ಠೇವಣಿ ಅನುಪಾತವು ಶೇ.46.94 ಇದ್ದು, ಪ್ರಸಕ್ತ ಸಾಲಿನಲ್ಲಿ ಶೇ.47.68 ರಷ್ಟಾಗಿ ಶೇ. 0.74 ರಷ್ಟು ಏರಿಕೆಯಾಗಿದೆ. ಸಿ.ಡಿ ಅನುಪಾತದಲ್ಲಿ ಶೇ. 50 ಕ್ಕಿಂತ ಕಡಿಮೆ ಇರಬಾರದು. ಮುಂದಿನ ದಿನಗಳಲ್ಲಿ ಸಿ.ಡಿ ಅನುಪಾತ ಹೆಚ್ಚಿಸಲು ಎಲ್ಲಾ ಬ್ಯಾಂರ‍್ಸ್ಗಳು ಕಾರ್ಯಪ್ರವೃತ್ತರಾಗಬೇಕು ಎಂದರು. ಇದೇ ಸಂದರ್ಭದಲ್ಲಿ 2025-26 ನೇ ಸಾಲಿನ ಎ.ಡಿ.ಪಿ ಪುಸ್ತಕ ಬಿಡುಗಡೆ ಮಾಡಲಾಯಿತು. ಸಭೆಯಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ, ನಬಾರ್ಡ್ನ ಡಿ.ಡಿ.ಎಂ ಸಂಗೀತಾ ಕಾರ್ಥಾ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಬ್ಯಾಂಕುಗಳ ಮುಖ್ಯಸ್ಥರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles