ಉಡುಪಿ: ಕೇಂದ್ರ ಸರಕಾರ ಯೋಜನೆಯಾದ ಜನಔಷಧಿ ಕೇಂದ್ರವನ್ನು ಆಸ್ಪತ್ರೆಯ ಆವರಣದೊಳಗಿದ್ದರೇ ಮುಚ್ಚಬೇಕೆಂಬ ಆದೇಶವನ್ನು ರಾಜ್ಯ ಸರಕಾರ ತಕ್ಷಣ ವಾಪಾಸು ಪಡೆಯಬೇಕು. ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಆಡಳಿತಾತ್ಮಕ ಕಿರುಕುಳ ಮುಂದುವರಿಸಿರುವುದಕ್ಕೆ ಇದೇ ಸಾಕ್ಷಿ ಎಂದು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ.
ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜನಔಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ ರೋಗಿಗಳಿಗೆ ಔಷಧ ಸಿಗುತ್ತಿದ್ದು, ಜನ ವಾರ್ಷಿಕ ₹ 250 ಕೋಟಿ ವ್ಯವಹಾರ ಮಾಡುತ್ತಿದ್ದಾರೆ. ದೇಶದಲ್ಲಿ 2 ಸಾವಿರ ಕೋಟಿ ವ್ಯವಹಾರ ಜನೌಷಧಿ ಕೇಂದ್ರದಲ್ಲಿ ನಡೆಯುತ್ತಿದೆ. ಶುಗರ್ ನ ₹95 ಮಾತ್ರೆ, ಇಲ್ಲಿ ₹ 5 ಸಿಗುತ್ತದೆ. ಕ್ಯಾಲ್ಸಿಯಂ 10 ಮಾತ್ರೆಗೆ ₹ 7. ಖಾಸಗಿ ಮೆಡಿಕಲ್ನಲ್ಲಿ ₹ 95 ಇದೆ. ನೀವು ಉಚಿತವಾಗಿ ಕೊಟ್ಟರೆ ಜನಔಷಧಿ ಕೇಂದ್ರ ತನ್ನಷ್ಟಕ್ಕೆ ಮುಚ್ಚಲಿ, ನೀವಾಗಿ ಯಾಕೆ ಮುಚ್ಚುತ್ತೀರಿ..? ಬಡ ರೋಗಿಗಳಿಗೆ ಬಹುದೊಡ್ಡ ಗಂಡಾಂತರ ಇದಾಗಿದ್ದು, ಕೇಂದ್ರದ ಯೋಜನೆಯನ್ನು ವಿಫಲಗೊಳಿಸುವ ವ್ಯವಸ್ಥಿತ ಷಡ್ಯಂತ್ರವಾಗಿದೆ. ಸಿಎಂ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಈ ವಿಚಾರದಲ್ಲಿ ಬಡ ರೋಗಿಗಳಿಗೆ ಕಿರುಕುಳ ಕೊಟ್ಟು ರಾಜಕೀಯ ಮಾಡಬಾರದು ಎಂದರು.
ಗೃಹಸಚಿವ ಪರಮೇಶ್ವರ್ ಅವರ ಸಂಸ್ಥೆಗಳ ಮೇಲಿನ ಇಡಿ ದಾಳಿಯಲ್ಲಿ ಕೇಂದ್ರ ಸರ್ಕಾರದ ಹಸ್ತಕ್ಷೇಪ ಇಲ್ಲ. ಅದೊಂದು ಸ್ವತಂತ್ರ ಸಂಸ್ಥೆ ಎಂದು ಮನಮೋಹನ್ ಸಿಂಗ್ ಅವರೇ ಹೇಳಿದ್ದರು. ತಮ್ಮ ರಕ್ಷಣೆಗೋಸ್ಕರ ಸಿಎಂ, ದಲಿತ ನಾಯಕನ ಮೇಲೆ ಇಡಿ ದಾಳಿ ಎಂದು ಬಿಂಬಿಸುತ್ತಿದ್ದಾರೆ. ಇಡಿಯ ಮುಂದೆ ದಲಿತ ಮತ್ತು ದಲಿತೇತರರು ಅಂತ ಬರುವುದಿಲ್ಲ. ಅಕ್ರಮ ವ್ಯವಹಾರ, ಸಂಪತ್ತು, ಆರ್ಥಿಕ ಅಪರಾಧ ಇರುವ ಕಡೆ ದಾಳಿಯಾಗುತ್ತದೆ. ಅವರವರ ಭಾವನೆಗೆ ತಕ್ಕಂತೆ ಮಾತನಾಡುತ್ತಿದ್ದಾರೆ. ದಾಳಿಯನ್ನು ಜಾತಿ ವರ್ಗ ಸಮಾಜಕ್ಕೆ ಸೀಮಿತ ಮಾಡಬೇಡಿ ಎಂದರು.
ಮಲ್ಲಿಕಾರ್ಜುನ ಖರ್ಗೆಯಂತ ಹಿರಿಯರು ಯುದ್ಧವನ್ನು ಚುಟುಪುಟು ಯುದ್ಧ ಎಂದು ಕರೆದಿದ್ದಾರೆ. ಶಾಸಕ ಮಂಜುನಾಥ್ ಕೊತ್ತೂರು ನಾಲ್ಕು ವಿಮಾನ ಹಾರಿಸಿದ್ದಾ ಅಂತಾರೆ..! ಬದುಕನ್ನು ಬಿಟ್ಟು ನಮ್ಮ,ನಿಮ್ಮೆಲ್ಲರನ್ನು ಕಾಯುವ ಸೈನಿಕರ ಟೀಕೆ ಇದು. ಗಡಿಯಲ್ಲಿರುವ ಯೋಧನಿಗೆ ಮಾಡಿದ ಅಪಮಾನ ಇದಾಗಿದ್ದು, ದೊಡ್ಡವರು ಅಂತಹ ಶಬ್ದ ಬಳಸುವಾಗ ಯೋಚನೆ ಮಾಡಬೇಕು, ಶಾಸಕ ಮಂಜುನಾಥ್ ಕೊತ್ತೂರನ್ನು ಕರೆಸಿ ಸಿಎಂ ಕನಿಷ್ಠ ಬುದ್ಧಿ ಹೇಳಲಿ, ನಿಮ್ಮ ಸರ್ಕಾರ ಮತ್ತು ನಿಮ್ಮ ಪಕ್ಷದ ಗೌರವಕ್ಕೆ ಕುಂದಾಗುತ್ತಿದೆ ಎಂದರು.
ಕೇಂದ್ರ ಸರ್ಕಾರದ ಅಧಿವೇಶನ ಕಾಲಕಾಲಕ್ಕೆ ನಡೆಯುತ್ತದೆ. ಯುದ್ಧದ ವಿಶೇಷ ಅಧಿವೇಶನ ಅವಶ್ಯಕತೆ ಇದ್ದರೆ ಕರೆಯುತ್ತಾರೆ. ಸದನದಲ್ಲಿ ಚರ್ಚೆ ಮಾಡದೆ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ಎಲ್ಲಾ ಪಕ್ಷಗಳು ಸ್ವಾಗತಿಸಿದೆ. ಕಾಂಗ್ರೆಸ್ ನಾಯಕರ ನಡುವೆ ವೈಯಕ್ತಿಕ ಭೇದ- ಭಿನ್ನಾಭಿಪ್ರಾಯ ಇರಬಹುದು. ಅನುಭವದ ಕೊರತೆಯಿಂದ ಕೆಲವರು ಮಾತನಾಡಿದ್ದಾರೆ. ಅನೇಕರು ಯುದ್ಧ ಮತ್ತು ನಿರ್ವಹಿಸಿದ ರೀತಿಯನ್ನು ಶ್ಲಾಘಿಸಿದ್ದಾರೆ ದೇಶದ ವಿಚಾರಕ್ಕೆ ಬಂದಾಗ ಎಲ್ಲರೂ ಒಗ್ಗಟ್ಟಾಗಿರಬೇಕು ಎಂದರು.
ಪ್ರತಿಪಕ್ಷ ನಾಯಕನ ಧ್ವನಿಯನ್ನು ಮೊಟಕುಗೊಳಿಸುವ ಕೆಲಸ ಇದು. ವಿರೋಧ ಪಕ್ಷದ ನಾಯಕನ ಧನಿ ಹತ್ತಿಕ್ಕಲು ಯತ್ನಿಸುತ್ತಿದ್ದೀರಾ…ಇದು ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ ಖರ್ಗೆಗೆ ನನ್ನ ಪ್ರಶ್ನೆ. ಜನತಂತ್ರ ವ್ಯವಸ್ಥೆಗೆ ನೀವು ಕೊಡುವ ಗೌರವ ಇದೇನಾ..? ಈ ಬಗ್ಗೆ ಬಿಜೆಪಿ ಹೋರಾಟವನ್ನು ಕೈಗೆತ್ತಿಕೊಳ್ಳುತ್ತಿದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಈ ಬಗ್ಗೆ ತುರ್ತು ಸಭೆ ನಡೆದಿದೆ. ದಲಿತರು ಹಿಂದುಳಿದ ವರ್ಗದವರು ಬಗ್ಗೆ ಮಾತನಾಡುವ ನೀವು, ದಲಿತ ನಾಯಕನನ್ನು ನಡೆಸಿಕೊಂಡ ರೀತಿ ಸರಿಯಾ.. ಪರಿಣಾಮಕಾರಿಯಾಗಿ ಛಲವಾದಿ ನಾರಾಯಣಸ್ವಾಮಿ ಕೆಲಸ ಮಾಡುತ್ತಿದ್ದಾರೆ. ಹಲ್ಲೆ, ಬೆದರಿಸುವ ಮೂಲಕ ಧನಿಯನ್ನು ಉಡುಗಿಸುವ ಮಟ್ಟ ಅಕ್ಷಮ್ಯ ಅಪರಾಧ. “ನಾಯಿ” ಎಂದ ಶಬ್ದಕ್ಕೆ ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ. ರಾಜಕೀಯದಲ್ಲಿ ವಿಷಾದ ವ್ಯಕ್ತಪಡಿಸಿದ ಹಲವಾರು ಉದಾಹರಣೆಗಳಿವೆ. ವಿಷಾದಿಸಿದ ನಂತರ ಮುತ್ತಿಗೆ ಹಾಕಿದ್ದು ಎಷ್ಟು ಸರಿ, ಮಾಧ್ಯಮದವರೇ ಮತ್ತೆ, ಮತ್ತೆ ಕೇಳಿ ನಾರಾಯಣಸ್ವಾಮಿ ದಾರಿ ತಪ್ಪಿಸಿದ್ದಾರೆ. ತಪ್ಪಾಗಿದೆ ಎನ್ನುವುದರಲ್ಲಿ ವಾದ ಇಲ್ಲ ಎಂದರು.
ಕನ್ನಡದ ಪ್ರಸಿದ್ಧ ಲೇಖಕಿ ಬಾನು ಮುಸ್ತಾಕ್ ಅವರ ಕೃತಿಗೆ ಅತ್ಯುನ್ನತ ಬೂಕರ್ ಪ್ರಶಸ್ತಿ ಬಂದಿದೆ. “ಎದೆಯ ಹಣತೆ” ಇಂಗ್ಲಿಷಿಗೆ ತರ್ಜುಮೆಗೊಂಡು, ವಿಶ್ವದ ಗಮನ ಸೆಳೆದಿದೆ. ಕನ್ನಡಕ್ಕೆ ಇದು ಬಹುದೊಡ್ಡ ಕೊಡುಗೆ. ಬಾನು ಮುಷ್ತಾಕ್ ಲೇಖನ, ವಿಚಾರಧಾರೆಗಳು ಮಹಿಳೆಯ ಬಗೆಗಿನ ಕಾಳಜಿಯ ಬರಹಗಳಿಗೆ ಸಿಕ್ಕಿದಂತಹ ಮನ್ನಣೆ. ಕರ್ನಾಟಕ ಮತ್ತು ಭಾರತ ದೇಶದ ಎಲ್ಲಾ ಅಭಿಮಾನಿಗಳು ಪ್ರಶಸ್ತಿಯನ್ನು ಗೌರವದಿಂದ ಸ್ವಾಗತಿಸುತ್ತೇವೆ. ಎದೆಯ ಹಣತೆ ಪುಸ್ತಕದಲ್ಲಿರುವ ವೈಚಾರಿಕ ಬರಹಗಳು ಇಡೀ ಜಗತ್ತಿನಲ್ಲಿ ವಿಜೃಂಭಿಸಲಿ. ಭಾನು ಮುಷ್ತಾಕ್ ಅವರ ಬಗ್ಗೆ ಹೆಮ್ಮೆ ಇದೆ, ನಮಗೆ ಖುಷಿ ಮತ್ತು ಸಂತೋಷವನ್ನು ಕೊಟ್ಟಿದೆ
ಕೋಟ ಶ್ರೀನಿವಾಸ ಪೂಜಾರಿ (ಸಂಸದರು)