ಉಡುಪಿ: ರಕ್ತದಾನ ಮಹಾದಾನವಾಗಿದ್ದು, ಆಪತ್ತಿನಲ್ಲಿರುವ ಮತ್ತೊಬ್ಬರ ಜೀವ ಉಳಿಸಲು ಸಹಾಯವಾಗುತ್ತದೆ. ಇಂತಹ ಕಾರ್ಯಕ್ಕೆ ಹೆಚ್ಚು ಜನರು ಮುಂದೆ ಬರಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಧಿಕಾರಿಯವರ ಕಚೇರಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ (ರಿ) ಉಡುಪಿ ಜಿಲ್ಲಾ ಶಾಖೆ, ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ ಉಡುಪಿ ಹಾಗೂ ರಕ್ತನಿಧಿ ಕೇಂದ್ರ ಕೆ.ಎಂ.ಸಿ ಮಣಿಪಾಲ ಇವರ ಸಹಯೋಗದೊಂದಿಗೆ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಒಂದು ಬಾರಿ ರಕ್ತದಾನ ಮಾಡುವುದರಿಂದ ಮೂರು ಜನರ ಜೀವಗಳನ್ನು ಉಳಿಸಲು ಸಾಧ್ಯ. ವೈದ್ಯಕೀಯ ಪದ್ಧತಿಯಲ್ಲಿ ಒಂದು ರಕ್ತದಾನವನ್ನು ವಿಭಿನ್ನ ಘಟಕಗಳಾಗಿ ಬೇರ್ಪಡಿಸಬಹುದು. ಪ್ರತಿಯೊಂದು ವಿಶಿಷ್ಟ ಉದ್ದೇಶವನ್ನು ಪೂರೈಸುತ್ತದೆ. ಇಂದು ನಡೆದ ರಕ್ತದಾನ ಶಿಬಿರದಲ್ಲಿಯೂ 100 ಕ್ಕೂ ಹೆಚ್ಚು ಜನ ಉತ್ಸಾಹಕರಾಗಿ ರಕ್ತದಾನ ಮಾಡಿರುವುದು ಅಭಿನಂದನಾರ್ಹ ಕಾರ್ಯ ಎಂದರು.

ಒಂದೇ ಸೂರಿನಡಿ ಹೆಚ್ಚು ಕಚೇರಿಗಳು ಇರುವುದರಿಂದ ಎಲ್ಲಾ ಇಲಾಖೆಗಳ ಸೌಹಾರ್ದತೆಯೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಸಹಕಾರಿಯಾಗಿದೆ ಎಂದ ಅವರು, ಸರಕಾರಿ ನೌಕರರು ತಮ್ಮ ಕೆಲಸ ಕಾರ್ಯಗಳ ಒತ್ತಡದ ನಡುವೆಯೂ ರಕ್ತದಾನದಂತಹ ಒಂದು ಉತ್ತಮ ಸಾಮಾಜಿಕ ಜವಾಬ್ದಾರಿ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತದಾನವು ಆಧುನಿಕ ಆರೋಗ್ಯ ರಕ್ಷಣೆಯ ಮೂಲಾಧಾರವಾಗಿದೆ. ಪ್ರತೀ ದಿನ ನೂರಾರು ಜನರ ಜೀವ ಉಳಿಸುವಲ್ಲಿ ಅನಿವಾರ್ಯ ಪಾತ್ರವನ್ನು ವಹಿಸುತ್ತದೆ. ಜನಸಾಮಾನ್ಯರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದರು. ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ವಿಶ್ವದಲ್ಲಿ ಪ್ರತೀ ಎರಡು ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ. ರಕ್ತದ ಅವಶ್ಯಕತೆಯನ್ನು ಪೂರೈಸಲು ರಕ್ತದಾನ ಶಿಬಿರಗಳು, ರಕ್ತದಾನ ದಿನಾಚರಣೆಗಳಿಗೆ ಸೀಮಿತವಾಗದೇ ಜನ್ಮದಿನಾಚರಣೆ ಸೇರಿದಂತೆ ಮತ್ತಿತರ ವಿಶೇಷ ಕಾರ್ಯಕ್ರಮಗಳಲ್ಲಿ ಸಹ ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದು ಸೂಕ್ತ. ಇದರಿಂದ ಆಪತ್ತಿನಲ್ಲಿರುವವರಿಗೆ ರಕ್ತವು ನೆರವಾಗಲಿದೆ ಎಂದರು.

ಜಿಲ್ಲಾ ಸರ್ಜನ್ ಡಾ. ಅಶೋಕ್ ಮಾತನಾಡಿ, ರಕ್ತದಾನದಿಂದ ತಮ್ಮ ರಕ್ತವು ಯಾವುದೇ ಜಾತಿ, ಧರ್ಮವಿಲ್ಲದೇ ಯಾರು ಪಡೆದರು ಎಂಬ ಮಾಹಿತಿಯಿಲ್ಲದೆ ದಾನ ಮಾಡಲು ಸಾಧ್ಯವಾಗುತ್ತದೆ ಎಂದ ಅವರು, ರಕ್ತದಾರರಿಂದ ಸಂಗ್ರಹವಾದ ಕೆಂಪು ರಕ್ತ ಕಣಗಳನ್ನು 35 ದಿನಗಳ ವರೆಗೆ, ಪ್ಲೇಟ್ ರೇಟ್ಸ್ಗಳನ್ನು 7 ದಿನಗಳ ವರೆಗೆ ಹಾಗೂ ಪ್ಲಾಸ್ಮಾವನ್ನು 1 ವಷದ ಮಿತಿಯೊಳಗೆ ಬಳಸಬೇಕು. ಪ್ರತಿದಿನ ರಕ್ತವನ್ನು ಪೂರೈಸಲು ನಿರಂತರ ರಕ್ತದಾನ ಅಗತ್ಯ. ಇಂದು ನಡೆದ ರಕ್ತದಾನದಲ್ಲಿ ಗಂಡು ಮಕ್ಕಳೇ ಹೆಚ್ಚು ರಕ್ತದಾನ ಮಾಡಿದ್ದು, ಕಂಡುಬಂದಿತು. ಹೆಣ್ಣು ಮಕ್ಕಳೂ ಸಹ ರಕ್ತದಾನದಲ್ಲಿ ಭಾಗವಹಿಸಿ, ಮತ್ತೊಬ್ಬರ ಜೀವ ಉಳಿಸಲು ಮುಂದಾಗಬೇಕು ಎಂದರು. ಮಣಿಪಾಲ ಕೆ.ಎಂ.ಸಿ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಶಮಿ ಶಾಸ್ತ್ರೀ ಯಾರೆಲ್ಲಾ ರಕ್ತದಾನ ಮಾಡಬಹುದು ಎಂಬ ಬಗ್ಗೆ ನಿಖರವಾದ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದ ಮೀನುಗಾರಿಕೆ ಸಹಾಯಕ ನಿರ್ದೇಶಕ ದಿವಾಕರ, ಯುವ ಸಬಲೀಕರಣ ಇಲಾಖೆಯ ಮಂಜುನಾಥ್, ಕಂದಾಯ ಇಲಾಖೆಯ ಯತೀಶ್ ಕಿದಿಯೂರು, ಸ್ವಾತಿ, ಲಾವಣ್ಯ, ಲತಾ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಇಂದು ನಡೆದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ 101 ಯೂನಿಟ್ನಷ್ಟು ರಕ್ತ ಸಂಗ್ರಹಣೆ ಮಾಡಲಾಯಿತು.