ಉಡುಪಿ : ಯೋಜನೆಗಳ ಪರಿಣಾಮಕಾರೀ ಅನುಷ್ಠಾನ ಹಾಗೂ ಹೊಸತನದ ಕಾರ್ಯ ನಿರ್ವಹಣೆಯಿಂದಾಗಿ ಉಡುಪಿ ಜಿಲ್ಲೆ ರಾಷ್ಟ್ರ ಹಾಗೂ ರಾಜ್ಯ ಹಂತದಲ್ಲಿ ಮುಂಚೂಣಿಯಲ್ಲಿದ್ದು, ಘನತಾಜ್ಯ ನಿರ್ವಹಣೆ, ಸಂಜೀವಿನಿ, ಮಾನವ ಅಭಿವೃದ್ಧಿ ಸೂಚ್ಯಂಕ ಸೇರಿದಂತೆ ಮಾದರಿ ಕೆಲಸ ಕಾರ್ಯಗಳನ್ನು ಮಾಡಲು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಣೆಗೆ ಅವಕಾಶ ಲಭಿಸಿರುವುದು ಸ್ಮರಣೀಯವಾಗಿದ್ದು, ಇಲ್ಲಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿ, ಸಿಬ್ಬಂದಿವರ್ಗದವರ ಸಹಕಾರ ಅಭಿನಂದನೀಯವಾಗಿದೆ ಎಂದು ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಶ್ರೀನಿವಾಸರಾವ್ ಹೇಳಿದರು.
ಅವರು ಮಣಿಪಾಲದ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸರಕಾರಿ ಸೇವೆಯಲ್ಲಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸೇವೆ ನೀಡುವ ಗರಿಷ್ಠ ಅವಕಾಶವಿದ್ದು, ಲಭಿಸಿದ ಅವಕಾಶಗಳಲ್ಲಿ ಯಶಸ್ವಿಯಾಗಿ ಸೇವೆ ನೀಡಲು ಸಹಕರಿಸಿದ ಹಿರಿಯ ಅಧಿಕಾರಿಗಳು, ಕ್ಷೇತ್ರ ಮಟ್ಟದ ಅಧಿಕಾರಿಗಳು ಹಾಗೂ ವಿಶೇಷವಾಗಿ ಜನಪ್ರತಿನಿಧಿಗಳ ಸಹಕಾರ ನಿರಂತರ ಸ್ಮರಣೀಯವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ನಾವೀನ್ಯತೆಯ ಕಾರ್ಯಚಟುವಟಿಕೆ ಹಾಗೂ ದಕ್ಷತೆಯ ಕಾರ್ಯಶೈಲಿಯಿಂದಾಗಿ ಶ್ರೀನಿವಾಸರಾವ್ ಅವರು ವಿಶಿಷ್ಟ ಅಧಿಕಾರಿಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಉಡುಪಿ ಜಿಲ್ಲಾ ಪಂಚಾಯತ್ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುವುದರೊಂದಿಗೆ ವಿಶೇಷ ಪ್ರಶಸ್ತಿ- ಪುರಸ್ಕಾರಗಳನ್ನು ಪಡೆದಿದ್ದು, ಬದ್ಧತೆ ಹೊಂದಿದ ಅಧಿಕಾರಿಗಳಿಂದ ಇದು ಸಾಧ್ಯವಾಗಿದ್ದು, ಶ್ರೀನಿವಾಸರಾವ್ ಅವರ ಶ್ರಮ ಇದರಲ್ಲಿ ಬಹುಮುಖ್ಯವಾಗಿದೆ. ಜಿಲ್ಲಾ ಪಂಚಾಯತ್ನಲ್ಲಿ ಉಪ ಕಾರ್ಯದರ್ಶಿ, ಮುಖ್ಯ ಲೆಕ್ಕಾಧಿಕಾರಿ, ಯೋಜನಾಧಿಕಾರಿ, ಯೋಜನಾ ನಿರ್ದೇಶಕ ಸೇರಿದಂತೆ ಹಲವು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವವನ್ನು ಹೊಂದಿದ್ದು, ಅವರ ಕರ್ತವ್ಯ ನಿರ್ವಹಣೆ ಮತ್ತು ಕ್ರಿಯಾಶೀಲತೆ ಯುವ ಅಧಿಕಾರಿಗಳಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಡಾ. ಉದಯಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ವಿವಿಧ ಪಂಚಾಯತಿಗಳ ಅಧಿಕಾರಿಗಳು, ಜೆ.ಜೆ.ಎಂ ಹಾಗೂ ಎಸ್.ಬಿ.ಎಂ ಯೋಜನಾ ಸಂಯೋಜಕರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು, ಶ್ರೀನಿವಾಸ್ ರಾವ್ ಪತ್ನಿ ಪೂರ್ಣಿಮಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪಿಡಿಒ ನಾಗೇಂದ್ರ ಪ್ರಾರ್ಥಿಸಿದರು. ಬ್ರಹ್ಮಾವರ ತಾ.ಪಂ ಸಹಾಯಕ ನಿರ್ದೇಶಕ ಮಹೇಶ್ ಕೆ. ನಿರೂಪಿಸಿ, ವಂದಿಸಿದರು.