ಉಡುಪಿ: ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘದ ವತಿಯಿಂದ ಮಾ.7 ರಿಂದ 9 ರವರೆಗೆ ಬೆಳಗ್ಗೆ 10 ರಿಂದ ರಾತ್ರಿ 8.30 ರವರೆಗೆ ನಗರದ ಎಮ್ಜಿಎಮ್ ಕಾಲೇಜಿನಲ್ಲಿ “ಪ್ರದರ್ಶನ ಮತ್ತು ಮಾರಾಟ ಮೇಳ” ವನ್ನು ಆಯೋಜಿಸಿದೆ. ಸಂಸ್ಥೆಯ ಮಾರುಕಟ್ಟೆ ಮತ್ತು ವಿನ್ಯಾಸ ವಿಭಾಗ ವ್ಯವಸ್ಥಾಪಕಿ ಪದ್ಮಶ್ರೀ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿಯನ್ನು ವಿವರಿಸಿದರು.
ಮಾ.7 ರಂದು ಮಧ್ಯಾಹ್ನ 12.30 ಕ್ಕೆ ಉಡುಪಿಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥರು ಚಾಲನೆ ನೀಡಲಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀನಾರಾಯಣ ಕಾರಂತ್ ಉಪಸ್ಥಿತರಿರಲಿದ್ದಾರೆ. ಚರಕದ ಅಧ್ಯಕ್ಷೆ ಮಹಾಲಕ್ಷ್ಮೀ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಮೇಳದಲ್ಲಿ 10 ಮಳಿಗೆಗಳು ಇರಲಿದ್ದು, ಚರಕದ ನೈಸರ್ಗಿಕ ಬಣ್ಣದ ಕೈ ಮಗ್ಗದ ಬಟ್ಟೆಗಳು, ಸಿದ್ದುಉಡುಪುಗಳು, ಅಖಿಲ ಭಾರತ ಕೈಮಗ್ಗ ಸಂಘಟನೆಗಳ ಒಕ್ಕೂಟದ ಉತ್ತರ ಕರ್ನಾಟಕ ಭಾಗದ ಅಪರೂಪದ ಸೀರೆಗಳಾದ ಗಾಡಿ ದಡಿ, ಗೋಮಿ ದಡಿ, ಚುಕ್ಕಿ ಪರಸ್, ತೊಡೆ ಪರಸ್, ಕಿನ್ನಾಳ ಸೀರೆಗಳು, ಟವೆಲ್ಸ್, ಬೆಡ್ಶೀಟ್ಗಳು, ನೇಕಾರರೇ ನೇಯ್ದ ಬೆಂಗಳೂರಿನ ವಿಶುದ್ದಿಯ ರೇಷ್ಮೆ ಸೀರೆಗಳು, ಟೆರಾಬಾನ್ ಅವರ ಕರಕುಶಲ ಟೆರಾಕೋಟಾ ಮತ್ತು ಮೆಟಲ್ ಆಭರಣಗಳು, ಶಿರಸಿಯ ಚೇತನಾ ಸಂಸ್ಥೆಯ ಬಾಳೆನಾರಿನ ಉತ್ಪನ್ನಗಳು “ಮರಳಿ ಮಣ್ಣಿಗೆ”ಯವರ ಮಡಿಕೆ-ಕುಡಿಕೆಗಳು, ಸಾವಯವ ಉತ್ಪನ್ನಗಳು, ಸಿರಿಧಾನ್ಯದಿಂದ ತಯಾರಿಸಿದ ವೈವಿಧ್ಯಮಯ ಆಹಾರ ಉತ್ಪನ್ನಗಳು, ನೈಸರ್ಗಿಕ ಪದಾರ್ಥಗಳಿಂದ ತಯಾರಿಸಿದ ಸೌಂದರ್ಯವರ್ಧಕಗಳು, ಕಾರ್ಕಳದ ತಪಸ್ ಫುಡ್ಸ್ ಮಖಾನ ಉತ್ಪನ್ನಗಳು, ಪುಸ್ತಕ ಮಳಿಗೆಗಳೂ ಇರಲಿವೆ ಎಂದರು.
ಚರಕ ಗ್ರಾಮೀಣ ಮಹಿಳೆಯರ ಸಹಕಾರ ಸಂಘವಾಗಿದ್ದು, ನೈಸರ್ಗಿಕ ಕೈಮಗ್ಗ ಬಟ್ಟೆ ಹಾಗೂ ಸಿದ್ಧವಸ್ತುಗಳ ಉತ್ಪಾದನೆ ಮತ್ತು ಮಾರಾಟಗಳಲ್ಲಿ ಕಳೆದ 29 ವರ್ಷಗಳಿಂದ ತೊಡಗಿಕೊಂಡಿದ್ದೇವೆ. ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ತಾವಿರುವ ಸ್ಥಳದಲ್ಲೇ ದುಡಿಮೆಯ ಅವಕಾಶ ಕಲ್ಪಿಸಬೇಕೆಂಬ ಆಶಯದಿಂದ ಆರಂಭವಾದ ಸಂಸ್ಥೆ ಚರಕ. ಪ್ರಸ್ತುತ ಸ್ಥಳೀಯವಾಗಿ ಸುಮಾರು 350 ಜನ ಹಾಗೂ ರಾಜ್ಯದ ಬೇರೆ, ಬೇರೆ ಜಿಲ್ಲೆಗಳ 400 ಜನ ನೇಕಾರರಿಗೆ, ಒಟ್ಟು 750 ಜನರಿಗೆ ಉದ್ಯೋಗ ನೀಡಿದೆ. ನಮ್ಮ ಉತ್ಪಾದನೆಯ ಪ್ರತಿ ಹಂತದಲ್ಲೂ ಪರಿಸರಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಂಡಿದ್ದೇವೆ. ನೇಕಾರಿಕೆಗೆ ಉತ್ತೇಜನ, ಕೈಮಗ್ಗ ಬಟ್ಟೆ ಬಳಕೆ ಹಾಗೂ ನೈಸರ್ಗಿಕ ಬಣ್ಣ ಉಪಯೋಗ- ನಮ್ಮ ಮೂಲ ಧ್ಯೇಯ ಎಂದರು