ಉಡುಪಿ : ನಗರದ ವಿದ್ಯಾಸಮುದ್ರತೀರ್ಥ ರಸ್ತೆಯ ಅಮ್ಮುಂಜೆ ಪೆಟ್ರೋಲ್ ಬಂಕ್ ಎದುರಿನ ಮಳೆನೀರು ಹರಿಯುವ ಕಾಲುವೆಯಲ್ಲಿ ಡ್ರೈನೇಜ್ ನೀರು ಹರಿಯುತ್ತಿರುವುದರಿಂದ ಪರಿಸರದಲ್ಲಿ ರೋಗ ಭೀತಿ ಉಂಟಾಗಿದೆ.

ಕಾಲುವೆಯಲ್ಲಿ ವಿಷಕಾರಿ ಡ್ರೈನೇಜ್ ನೀರು ಹರಿಯುತ್ತಿರುವ ಪರಿಣಾಮ ಸಮೀಪದ ಬಾವಿಗಳ ಕುಡಿಯುವ ನೀರು ಕಲುಷಿತಗೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ. ಕಲುಷಿತ ನೀರು ಸೇವಿಸಿದ ಕೆಲವು ಮನೆಮಂದಿ ವಾಂತಿ–ಬೇಧಿಗೆ ತುತ್ತಾಗಿರುವ ಘಟನೆಗಳು ನಡೆದಿರುವುದಾಗಿ ತಿಳಿದುಬಂದಿದೆ.

ಕಾಲುವೆ ಪ್ರದೇಶದಲ್ಲಿ ತೀವ್ರ ದುರ್ವಾಸನೆ ವ್ಯಾಪಿಸಿ ಜನರಿಗೆ ವಾಕರಿಕೆ ಉಂಟುಮಾಡುತ್ತಿದೆ. ಅಲ್ಲದೆ, ಕಾಲುವೆ ಮಾರಕ ಸೊಳ್ಳೆಗಳ ಸಂತಾನೋತ್ಪತ್ತಿಗೆ ಅನುಕೂಲಕರ ತಾಣವಾಗಿರುವುದರಿಂದ ರೋಗವಾಹಕ ಸೊಳ್ಳೆಗಳ ಮೂಲಕ ವಿವಿಧ ವ್ಯಾಧಿಗಳು ಪಸರಿಸಬಹುದೆಂಬ ಆತಂಕ ವ್ಯಕ್ತವಾಗಿದೆ. ಸಾರ್ವಜನಿಕ ವಲಯದಲ್ಲಿ ಗಂಭೀರ ಸಮಸ್ಯೆ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹಾಗೂ ನಗರಾಡಳಿತ ತಕ್ಷಣ ಕ್ರಮ ಕೈಗೊಂಡು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಬೇಕು ಎಂದು ಉಡುಪಿ ಜಿಲ್ಲಾ ನಾಗರೀಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ಆಗ್ರಹಿಸಿದ್ದಾರೆ.



