ಉಡುಪಿ : ಉಡುಪಿ ಜಿಲ್ಲೆಯ ಕಾಪು ಸಮೀಪ ಖಾಲಿ ಮನೆಯೊಂದರಲ್ಲಿ ಕಳ್ಳರು ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ದೋಚಿದ ಘಟನೆ ಡಿಸೆಂಬರ್ 4ರಂದು ಬೆಳಿಗ್ಗೆ ಸಂಭವಿಸಿದೆ. ಮಲ್ಲಾರು ಗ್ರಾಮದ ನಿವಾಸಿ ರಾಘವೇಂದ್ರ ಕಿಣಿ ಅವರ ಮನೆಯಲ್ಲಿ ಈ ಕಳವು ನಡೆದಿದೆ.

ಐಎಸ್ ಆರ್ ಪಿಎಲ್ ನಲ್ಲಿ ರಾಘವೇಂದ್ರ ಕಿಣಿ ಹೌಸ್ಕೀಪರ್ ಆಗಿದ್ದು, ಘಟನೆ ದಿನ ಬೆಳಿಗ್ಗೆ ತಮ್ಮ ತಾಯಿಯನ್ನು ಅಕ್ಕನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ತೆರಳಿದ್ದರು. ನಂತರ ಅವರ ಪತ್ನಿಯೂ ಮಕ್ಕಳ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಬೆಳಿಗ್ಗೆ 9.45ಕ್ಕೆ ಮನೆಯನ್ನು ಹೊರಗಿನಿಂದ ಬೀಗ ಹಾಕಿ, ಮನೆಯ ವಿದ್ಯುತ್ ಮೀಟರ್ ಬಾಕ್ಸ್ನಲ್ಲಿ ಕೀ ಇಟ್ಟು ತೆರಳಿದ್ದರು. ಈ ನಡುವೆ ಬೆಳಿಗ್ಗೆ 9.45ರಿಂದ ಮಧ್ಯಾಹ್ನ 1.10ರ ಅವಧಿಯಲ್ಲಿ, ಕಳ್ಳರು ಇದೇ ಕೀ ಬಳಸಿ ಮನೆಯ ಬಾಗಿಲು ತೆರೆಯುವ ಮೂಲಕ ಒಳ ಪ್ರವೇಶಿಸಿ, ಬೆಡ್ರೂಮ್ನ ಕಪಾಟಿನಲ್ಲಿ ಇದ್ದ ಅಮೂಲ್ಯ ಆಭರಣಗಳನ್ನು ಕಳವುಮಾಡಿದ್ದಾರೆ.

ಕಳ್ಳರು 28 ಗ್ರಾಂ ತೂಕದ ಹವಳ ಇರುವ ಕಾಶಿ ತಾಳಿ 1,40,000 ರೂಪಾಯಿ ಮೌಲ್ಯದ ಆಭರಣ ಜೊತೆ ಒಟ್ಟು ಸುಮಾರು 72 ಗ್ರಾಂ ಚಿನ್ನದ ಆಭರಣಗಳು ಮತ್ತು ಬೆಳ್ಳಿ ವಸ್ತುಗಳು ಸೇರಿ ಒಟ್ಟು 3,90,000 ರೂಪಾಯಿ ಮೌಲ್ಯದ ಆರಂಭ ಕಳವು ಮಾಡಲಾಗಿದೆ. ಈ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



