ಉಡುಪಿ: ಮದ್ಯಪಾನ ಮಾಡಿ ಕೆಲಸ ಮಾಡುತ್ತಿದ್ದ ಕೆಲಸಗಾರನಿಗೆ ಗದರಿಸಿದ ಎನ್ನುವ ಕಾರಣಕ್ಕೆ ಕಾರ್ಕಳ ಮೂಲದ ಮಾಲೀಕನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಕಾರ್ಕಳ ತಾಲೂಕಿನ ಎಣ್ಣೆಹೊಳೆ ಕುಮೇರುಮನೆ ನಿವಾಸಿ ಸಂತೋಷ್ ಶೆಟ್ಟಿ (46) ಹತ್ಯೆಯಾದ ಮಾಲೀಕ.

ಉತ್ತರ ಪ್ರದೇಶ ಮೂಲದ ಆರೋಪಿ ಇತ್ತೀಚೆಗಷ್ಟೆ ಸಂತೋಷ್ ಶೆಟ್ಟಿಹೋಟೆಲ್ ಗೆ ಕೆಲಸಕ್ಕೆ ಸೇರಿ, ಮುಂಗಡವಾಗಿ 2,500 ರೂ.ಗಳನ್ನು ಪಡೆದಿದ್ದ. ಇನ್ನು ಹೆಚ್ಚಿನ ಹಣ ಬೇಕು ಎಂದು ಮಾಲೀಕ ಸಂತೋಷ್ ಬಳಿ ಕೇಳಿದ್ದ ಎನ್ನಲಾಗಿದೆ. ಮೊದಲು ಸರಿಯಾಗಿ ಕೆಲಸ ಮಾಡು ಎಂದು ಮಾಲೀಕ ಸಂತೋಷ್ ತಿಳಿಸಿದ್ದರು. ಮಂಗಳವಾರ ರಾತ್ರಿ ಆರೋಪಿಗೆ ಕೆಲಸದ ಸಮಯದಲ್ಲಿ ಮದ್ಯಪಾನ ಮಾಡಿದ್ದಕ್ಕೆ ಸಂತೋಷ್ ಶೆಟ್ಟಿ ಬೈದು ಬುದ್ಧಿವಾದ ಹೇಳಿದ್ದರು. ಇದರಿಂದ ಆಕ್ರೋಶಗೊಂಡ ಸಿಬ್ಬಂದಿ ಅಡುಗೆ ಕೋಣೆಯಿಂದ ಕತ್ತಿ ತಂದು, ಕುಳಿತಿದ್ದ ಶೆಟ್ಟಿ ಅವರ ಹಿಂದಿನಿಂದ ಕುತ್ತಿಗೆಗೆ ಎರಡು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ, ಉಪ ಪೊಲೀಸ್ ಆಯುಕ್ತರು, ಸಹಾಯಕ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಮೋಹನ್ ಖಂಡಾರೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಈ ಕುರಿತು ಪುಣೆ ಪೊಲೀಸ್ ಠಾಣೆಯಲ್ಲಿ ತನಿಖೆ ನಡೆಯುತ್ತಿದ್ದು, ಸಂತೋಷ್ ಶೆಟ್ಟಿ ಅವರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಹುಟ್ಟೂರು ಎಣ್ಣೆಹೊಳೆಗೆ ತರಲಾಗುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.


