ಉಡುಪಿ : ಈ ಬಾರಿ ಮೀನುಗಾರರಿಗೆ ನಷ್ಟದ ಮೇಲೆ ನಷ್ಟ ಸಂಭವಿಸಿದೆ ಎಂದರೆ ತಪ್ಪಾಗಲಾರದು. ಒಂದು ಕಡೆ ಮತ್ಸ್ಯ ಕ್ಷಾಮ, ಮತ್ತೊಂದು ಕಡೆ ಹವಾಮಾನ ವೈಪರಿತ್ಯದಿಂದಾಗಿ ಅವಧಿಗೂ ಮೊದಲೇ ಮಳೆಗಾಲ ಆರಂಭವಾಗಿ ಮೀನುಗಾರಿಕಾ ಋತು ಅಂತ್ಯವಾಗಿದೆ. ಈ ಎರಡು ಕಾರಣದಿಂದಾಗಿ ಈ ಬಾರಿ ಜಿಲ್ಲೆಯ ಮೀನುಗಾರರು ಹೈರಾಣ ಆಗಿದ್ದಾರೆ. ಕೇವಲ ಮೀನುಗಾರರು ಅಷ್ಟೆ ಅಲ್ಲ ಮೀನು ಖರೀದಿಸುವ ಗ್ರಾಹಕರು ಕೂಡ ಈ ಬಾರಿ ಮೀನಿಗೆ ದುಬಾರಿ ಬೆಲೆ ಕೊಂಡುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸದ್ಯ ಮೀನಿಗೆ ಬಾರಿ ಬೇಡಿಕೆ ಇದೆ ಆದರೆ ಮೀನುಗಾರಿಕೆ ಮಾಡುವ ಅವಕಾಶವು ಇಲ್ಲ ಪರಿಸ್ಥಿತಿಯು ಕೂಡ ಸರಿ ಇಲ್ಲ.

ಪ್ರತಿ ವರ್ಷವೂ ಕೂಡ ಆಗಸ್ಟ್ ತಿಂಗಳಿನಲ್ಲಿ ಜಿಲ್ಲೆಯ ಮೀನುಗಾರರು ಮೀನುಗಾರಿಕೆಯನ್ನು ಅತ್ಯಂತ ಸಂಭ್ರಮದಿಂದ ಪ್ರಾರಂಭಿಸುತ್ತಾರೆ. ಅಗಸ್ಟ್ ತಿಂಗಳಿನಿಂದ ಮಳೆಗಾಲದ ಆರಂಭ ಅಂದರೆ ಜೂನ್ ತಿಂಗಳಿನ ವರೆಗೂ ಮೀನುಗಾರಿಕೆ ಮಾಡಿ ಒಂದಿಷ್ಟು ಲಾಭ ಪಡೆದುಕೊಳ್ಳುತ್ತಾರೆ. ಆದರೆ ಕಳೆದ ಆಗಸ್ಟ್ ತಿಂಗಳಲ್ಲಿ ಉತ್ತಮ ಮೀನುಗಾರಿಕೆಯ ನಿರೀಕ್ಷೆ ಇಟ್ಟು ಕಡಲಿಗೆ ತೆರಳಿದ್ದ ಮೀನುಗಾರಿಕಾ ಬೋಟ್ ಮಾಲಕರು ನಿರೀಕ್ಷಿಸಿದಷ್ಟು ಮೀನು ಸಿಗದ ಹಿನ್ನೆಲೆಯಲ್ಲಿ ನಷ್ಟದಲ್ಲಿ ಮೀನುಗಾರಿಕಾ ಋತುವನ್ನ ಕಳೆದಿದ್ದಾರೆ. ಸಮುದ್ರದಲ್ಲಿ ಹಿಂದೆ ಸಿಗುತ್ತಿದ್ದ ರೀತಿಯಲ್ಲಿ ಪ್ರಸ್ತುತ ಮೀನುಗಳು ಸಿಗದೇ ಇರುವ ಕಾರಣದಿಂದಾಗಿ ಈ ಬಾರಿಯಾ ಮೀನುಗಾರಿಕಾ ಋತು ನಷ್ಟದಲ್ಲೇ ಸಾಗಿದೆ ಎನ್ನುತ್ತಾರೆ ಮೀನುಗಾರರು. ಹೀಗಾಗಿ ಅವಧಿಗೆ ಮೊದಲು ಅಂದರೆ ಮೀನುಗಾರಿಕಾ ಋತು ಅಂತ್ಯವಾಗುವ 4 ತಿಂಗಳು ಮೊದಲೇ ನಷ್ಟದಿಂದ ಮೀನುಗಾರಿಕೆ ಮಾಡಲಾಗದೆ ಬೋಟ್ ಗಳನ್ನು ಮಾಲಕರು ಲಂಗರು ಹಾಕಿದ್ದಾರೆ. ಒಂದಿಷ್ಟು ಬೋಟ್ಗಳನ್ನ ಹೊರತುಪಡಿಸಿ ಬಹುತೇಕ ಮೀನುಗಾರಿಕಾ ಬೋಟ್ಗಳು ಮೀನುಗಾರಿಕಾ ನಿಷೇಧ ಕ್ಕೂ ಮೊದಲೇ ನಷ್ಟದ ಹಿನ್ನಲೆಯಲ್ಲಿ ಲಂಗರು ಹಾಕಿವೇ.

ಇನ್ನು ಆಳ ಸಮುದ್ರ ಮೀನುಗಾರಿಕೆಗೆ ತೆರಳುವ ಮೀನುಗಾರಿಕಾ ಬೋಟ್ ಗಳು ಸುಮಾರು ಎರಡು ವಾರಗಳ ಕಾಲ ಕಡಲಿನಲ್ಲಿಯೇ ಉಳಿದು ಮೀನುಗಾರಿಕೆ ನಡೆಸುತ್ತವೆ. ಹೀಗಾಗಿ ಮೀನುಗಾರಿಕೆ ನಡೆಸುವ ಸಿಬ್ಬಂದಿಗಳಿಗೆ ಸಂಬಳ, ಬೋಟ್ ನಡೆಸಲು ಬೇಕಾಗುವ ಡೀಸೆಲ್, ಹಿಡಿದ ಮೀನುಗಳನ್ನು ಶೇಖರಿಸಿಕೊಳ್ಳಲು ಮಂಜುಗಡ್ಡೆ ಹೀಗೆ ಒಟ್ಟು 5-6 ಲಕ್ಷದವರೆಗೆ ಬೇಕಾಗುತ್ತದೆ. ಒಮ್ಮೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟ್ 8-9 ಲಕ್ಷ ರೂಪಾಯಿ ಬೆಲೆಯ ಮೀನುಗಳನ್ನ ಹಿಡಿದು ತಂದರೆ ಮಾತ್ರ ಲಾಭ, ಆದರೆ ಈ ಬಾರಿ ಮೀನುಗಾರಿಕೆಗೆ ತೆರಳಿದ ಬಹುತೇಕ ಆಳ ಸಮುದ್ರ ಮೀನುಗಾರಿಕಾ ಬೋಟ್ ಗಳು 2-4 ಲಕ್ಷ ಆದಾಯ ಮಾಡಿಕೊಂಡು ಮರಳಿವೆ. ಇದು ಮೀನುಗಾರಿಕಾ ಬೋಟ್ ನಡೆಸುವ ಮಾಲಕನಿಗೆ ನಷ್ಟವನ್ನುಂಟು ಮಾಡುತ್ತದೆ, ಹೀಗಾಗಿ ಲಕ್ಷಾಂತರ ರೂಪಾಯಿ ವಿನಿಯೋಗಿಸಿ ಚಿಲ್ಲರೆ ಹಣ ಪಡೆಯುವ ಸಾಹಸವನ್ನ ಮೀನುಗಾರರು ಮಾಡುತ್ತಿಲ್ಲ.

ಒಟ್ಟಾರೆಯಾಗಿ ಈ ಬಾರಿಯ ಮೀನುಗಾರಿಕಾ ಋತು ಮೀನುಗಾರಿಕೆ ಅಷ್ಟಾಗಿ ಆದಾಯಕರವಾಗಿಲ್ಲ. ಅವೈಜ್ಞಾನಿಕ ರೀತಿಯ ಮೀನುಗಾರಿಕೆಗೆ ಮತ್ಯಕ್ಷಾಮಕ್ಕೆ ಕಾರಣ ಎನ್ನುತ್ತಾರೆ ತಜ್ಞರು. ಇನ್ನು ನಿರಂತರ ಹವಾಮಾನ ವೈಪರೀತ್ಯವು ಕೂಡ ಮೀನುಗಾರರನ್ನ ಕಂಗಡಿಸಿದೆ. ಕೇವಲ ಕರ್ನಾಟಕ ಮಾತ್ರ ಬಲ್ಲದೆ ಪಕ್ಕದ ಗೋವಾ ಕೇರಳ ಹಾಗೂ ಗುಜರಾತ್ ಮೀನುಗಾರರು ಕೂಡ ಮತ್ಯಕ್ಷಾಮದಿಂದ ಕಂಗೆಟ್ಟಿದ್ದಾರೆ.