ಉಡುಪಿ: ಉಡುಪಿ ಜಿಲ್ಲೆಯಲ್ಲಿ ಆರೋಗ್ಯ ಕವಚ 108 ಸೇವೆ ವಿಚಾರವಾಗಿ ಹೊಸದೊಂದು ಸಮಸ್ಯೆ ಸೃಷ್ಟಿಯಾಗಿದೆ. ದಿನದ 24 ಗಂಟೆಗಳ ಕಾಲವು ರೋಗಿಗಳ ನೆರವಿಗೆ ಸಿಗಬೇಕಾದ ಅಂಬ್ಯುಲೆನ್ಸ್ ಗಳು ಈಗ ಕೇವಲ 16 ಗಂಟೆಗಳ ಕಾಲ ಮಾತ್ರವೇ ಸೇವೆ ಸಿಗುತ್ತಿದೆ ಎನ್ನುವ ಆರೋಪಗಳು ಕೇಳಿ ಬರುತ್ತಿದೆ. ಅದರಲ್ಲೂ 108 ಅಂಬ್ಯುಲೆನ್ಸ್ ಗಳು ಸರಿಯಾಗಿ ನೋಡಿಕೊಳ್ಳದ ಹಿನ್ನಲೆಯಲ್ಲಿ 18 ಅಂಬ್ಯುಲೆನ್ಸ್ ಗಳಲ್ಲಿ ಕೇವಲ 6 ಅಂಬ್ಯುಲೆನ್ಸ್ ಗಳು ಮಾತ್ರ ಸೇವೆಗೆ ಲಭ್ಯವಿದ್ದು ಉಳಿದವುಗಳು ಮೂಲೆ ಸೇರಿದೆ. ಈ ಕುರಿತು ಜಿಲ್ಲೆಯ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಆಕ್ರೋಶ ಹೊರ ಹಾಕಿದ್ದಾರೆ.

ಸದ್ಯ ಉಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ 108 ಆಂಬುಲೆನ್ಸ್ ಸೇವೆ ದಿನದ 24ಗಂಟೆಗಳ ಬದಲಿಗೆ ಕೇವಲ 16ಗಂಟೆಗಳಷ್ಟೇ ಸೇವೆ ನೀಡುತ್ತಿದ್ದು, ರೋಗಿಗಳು ತುರ್ತು ಸೇವೆ ಸಿಗದೆ ಪರದಾಡುವಂತಾಗಿದೆ. 108ಆಂಬುಲೆನ್ಸ್ ದಿನದ 24 ಗಂಟೆ ಸೇವೆ ನೀಡುವ ಉದ್ದೇಶ ಹೊಂದಿದೆ, ಆದರೆ ಅದರ ಪಾಲನೆ ಆಗುತ್ತಿಲ್ಲ. ತುರ್ತು ಸಂದರ್ಭದಲ್ಲಿ ಐದಾರು ಗಂಟೆಗಳು ಕಳೆದರೂ ಆಂಬುಲೆನ್ಸ್ ಬರುತ್ತಿಲ್ಲ. ಇಂದು ಉಡುಪಿ ಹೊರವಲಯದ ರೋಗಿ ಒಬ್ಬರಿಗೆ ಆಸ್ಪತ್ರೆಗೆ ದಾಖಲಿಸಲು ಬೆಳಗ್ಗೆ 10 ಗಂಟೆಗೆ ಪೋನ್ ಮಾಡಿದ್ದರು ಮಧ್ಯಾಹ್ನ 3 ಗಂಟೆಯಾದರೂ ಅಂಬುಲೆನ್ಸ್ ಬಂದಿಲ್ಲ. ಹೀಗಾದರೆ ಬಡ ರೋಗಿಗಳ ಪ್ರಾಣ ಉಳಿಯುವುದು ಎಂತು ಎಂಬುದನ್ನು ಸಂಬಂಧ ಪಟ್ಟವರು ಸ್ಪಷ್ಟ ಪಡಿಸಬೇಕು ಎಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಷ್ಟೋ ಸಂದರ್ಭದಲ್ಲಿ ಬಡ ರೋಗಿಗಳನ್ನು ಜಿಲ್ಲಾಸ್ಪತ್ರೆಯಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇರುತ್ತದೆ.ಅಂತಹ ಪರಿಸ್ಥಿತಿಯಲ್ಲಿ 108 ಸೇವೆಗೆ ಸಿಗದಿದ್ದಾರೆ ದುಬಾರಿ ಖಾಸಗಿ ಆಂಬುಲೆನ್ಸ್ ಮಾಡಿ ಅವರನ್ನು ಕೊಂಡೊಯ್ಯಲು ಸಾಧ್ಯವೇ? ಹೀಗಾಗಿ ಅದೆಷ್ಟೋ ರೋಗಿಗಳು ದಾರಿಯಲ್ಲಿಯೇ ಪ್ರಾಣ ಬಿಟ್ಟ ಉದಾಹರಣೆಗಳಿವೆ. ಪ್ರಸ್ತುತ 108 ಸೇವೆಯನ್ನು ಆವಲೋಕಿಸಿದಾಗ 3 ಪಾಳಿಯಲ್ಲಿ 8 ಗಂಟೆಯಂತೆ 24ಗಂಟೆ ಕರ್ತವ್ಯ ನಿರ್ವಹಿಸ ಬೇಕಾದ ಈ ಆಂಬುಲೆನ್ಸ್ಗಳು ಯಾವುದಾದರೊಂದು ಪಾಳಿಯನ್ನು ನಿರ್ವಹಿಸುತ್ತಿಲ್ಲ. ಈ ಸಂದರ್ಭದಲ್ಲಿ ಫೋನ್ ಮಾಡಿದರೆ ಆಂಬುಲೆನ್ಸ್ ಖಾಲಿ ಇಲ್ಲ ಎಂದೋ ಅಥವಾ ತಾಂತ್ರಿಕ ದೋಷ ಎಂದೋ ಸಬೂಬು ನೀಡಲಾಗುತ್ತಿದೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ನಡೆಯುತ್ತಿದೆ. ಈ ಬಗ್ಗೆ ಹಲವಾರು ಬಾರಿ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನ ಸೆಳೆಯಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಬಡ ರೋಗಿಗಳು ಪ್ರಾಣ ಬಿಡುವಂತಾಗಿದೆ.

ಉಡುಪಿ ಜಿಲ್ಲೆಯಲ್ಲಿ ಆರಂಭದಲ್ಲಿ 18 ಆಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದು , ಪಾಳಿಯಲ್ಲಿ ನೀಡುತ್ತಿರುವುದರಿಂದ ತುರ್ತು ಸಂದರ್ಭದಲ್ಲಿ ಆರೇಳು ಅಂಬುಲೆನ್ಸ್ ಗಳು ಮಾತ್ರ ಲಭ್ಯವಿರುತ್ತವೆ. ಇವುಗಳಲ್ಲಿ ತಾಂತ್ರಿಕ ದೋಷ ಅಥವಾ ಇನ್ನಿತರ ಕಾರಣ ಗಳಿಂದ ನಿಂತರೆ ದೇವರೇ ಗತಿ. ಹೀಗಾಗಿ ಶಿಫ್ಟ್ ವ್ಯವಸ್ತೆಯನ್ನು ಕೈ ಬಿಡಬೇಕು. ಎಲ್ಲಾ 18ಆಂಬುಲೆನ್ಸ್ ಗಳು 24/7 ಲಭ್ಯವಾಗಬೇಕು. ಆದರೆ ಇದೀಗ ಇವರ ಸೇವಾ ನ್ಯೂನತೆಯಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಂಬಂಧ ಪಟ್ಟ ಇಲಾಖಾ ಅಧಿಕಾರಿಗಳು ತುರ್ತಾಗಿ ಇತ್ತ ಗಮನ ಹರಿಸಬೇಕು. ಜನರ ಪ್ರಾಣ ಉಳಿಸುವ ಈ 108 ಸೇವೆ 24/7ಕಾರ್ಯ ನಿರ್ವಹಿಸುವಂತಾಗಬೇಕು ಎಂಬುದೇ ನಮ್ಮ ಆಗ್ರಹ.
ವಿಶು ಶೆಟ್ಟಿ ಅಂಬಲಪಾಡಿ, ಸಮಾಜ ಸೇವಕರು ಉಡುಪಿ



