ಉಡುಪಿ: ಕಲಾವಿದರ ಊರು ಎಂದೇ ಹೆಸರಾದ ಉಡುಪಿಯ ಮರ್ಣೆ ಪ್ರದೇಶದಲ್ಲಿ ಕಲೆಯ ಮೂಲಕ ಸಾಮಾಜಿಕ ಸಂದೇಶ ನೀಡುವ ಅಪರೂಪದ ಕಾರ್ಯಕ್ರಮವೊಂದು ನಡೆದಿದೆ. ಇಲ್ಲಿನ ಪ್ರಸಿದ್ಧ ಕಲಾವಿದ ಮಹೇಶ್ ಮರ್ಣೆ ತಮ್ಮ ಮಗಳ ಆರನೇ ವರ್ಷದ ಹುಟ್ಟುಹಬ್ಬವನ್ನು ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸದೇ, ಸಾರ್ವಜನಿಕರಿಗೆ ಉಪಯುಕ್ತವಾಗುವ ರೀತಿಯಲ್ಲಿ ವಿಶಿಷ್ಟವಾಗಿ ಆಚರಿಸಿದ್ದಾರೆ.

ಗ್ರಾಮದಲ್ಲಿದ್ದ ಪಾಳು ಬಿದ್ದ, ನಿರ್ಲಕ್ಷ್ಯಗೊಂಡ ಬಸ್ ನಿಲ್ದಾಣವನ್ನು ಗುರುತಿಸಿದ ಅವರು, ತಮ್ಮ ಕಲಾ ಪ್ರತಿಭೆಯನ್ನು ಬಳಸಿಕೊಂಡು ಅದಕ್ಕೆ ಹೊಸ ಜೀವ ತುಂಬಿದರು. ಗೋಡೆಗಳ ಮೇಲೆ ಬಣ್ಣಬಣ್ಣದ ಚಿತ್ರಗಳು, ಆಕರ್ಷಕ ಚಿತ್ತಾರಗಳು ಹಾಗೂ ಮನಮುಟ್ಟುವ ಕಲಾಕೃತಿಗಳನ್ನು ಬಿಡಿಸುವ ಮೂಲಕ ಬಸ್ ನಿಲ್ದಾಣವನ್ನು ಸಂಪೂರ್ಣವಾಗಿ ರೂಪಾಂತರಗೊಳಿಸಿದರು. ಮುಂಚೆ ನಿರ್ಜೀವವಾಗಿ ಕಂಡುಬರುತ್ತಿದ್ದ ಬಸ್ ನಿಲ್ದಾಣ ಇದೀಗ ಕಲರ್ಫುಲ್ ರೂಪ ಪಡೆದು ಎಲ್ಲರ ಗಮನ ಸೆಳೆಯುತ್ತಿದೆ.

ಇದೀಗ ಆ ಬಸ್ ನಿಲ್ದಾಣದಲ್ಲಿ ನಿಂತರೆ ಪ್ರಯಾಣಿಕರಿಗೆ ವಿಭಿನ್ನ ಅನುಭವ ದೊರೆಯುತ್ತಿದ್ದು, ಮಕ್ಕಳು, ಯುವಕರು ಹಾಗೂ ವಯೋವೃದ್ಧರು ಚಿತ್ರಗಳನ್ನು ನೋಡಿ ಸಂತಸ ಪಡುತ್ತಿದ್ದಾರೆ. ಊರಿನ ಜನರು ಕಲಾವಿದನ ಈ ಸಾಮಾಜಿಕ ಕಾಳಜಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇದು ಕೇವಲ ಹುಟ್ಟುಹಬ್ಬದ ಆಚರಣೆ ಅಲ್ಲ, ಸಾರ್ವಜನಿಕ ಜಾಗವನ್ನು ಸುಂದರಗೊಳಿಸುವ ಪ್ರೇರಣಾದಾಯಕ ಕೆಲಸ ಎಂದು ಶ್ಲಾಘಿಸಿದ್ದಾರೆ.


ಮಗಳ ಹುಟ್ಟುಹಬ್ಬದ ನೆನಪಿಗಾಗಿ ಸಾರ್ವಜನಿಕ ಸ್ಥಳಕ್ಕೆ ಶಾಶ್ವತ ಸೌಂದರ್ಯ ನೀಡಿದ ಮಹೇಶ್ ಮರ್ಣೆಯ ಈ ಪ್ರಯತ್ನ, ಇತರರಿಗೂ ಮಾದರಿಯಾಗಿದ್ದು, ಕಲೆಯ ಮೂಲಕ ಸಮಾಜಕ್ಕೆ ಕೊಡುಗೆ ನೀಡಬಹುದೆಂಬ ಸಂದೇಶವನ್ನು ಸಾರುತ್ತಿದೆ. ಇದೀಗ ಈ ಕಲರ್ಫುಲ್ ಬಸ್ ನಿಲ್ದಾಣ ಮರ್ಣೆ ಪ್ರದೇಶದ ಹೊಸ ಆಕರ್ಷಣೆಯಾಗಿ ಮಾರ್ಪಟ್ಟಿದೆ.



