ಉಡುಪಿ : ಕಥೆ ಕವನಗಳು ಮೌಖಿಕ ಸಂಸ್ಕೃತಿಯ ಅಡಿಪಾಯವಾಗಿದ್ದು ಇಂದಿನ ಈ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ಸರಿ ತಪ್ಪುಗಳ ಮೌಲ್ಯಗಳನ್ನು ಗುರುತಿಸಲು ಸಾಧ್ಯವಿದೆ, ಅಲ್ಲದೇ ಮೌಖಿಕ ಪರಂಪರೆಯ ಜ್ಞಾನ ಮತ್ತು ವಿವೇಕವನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಸುಲಭ ಮತ್ತು ಪರಿಣಾಮಕಾರಿ ಸಾಧನವೇ ಕಥೆ ಹೇಳುವುದು ಎಂದು ರೋ| ಪಿ. ರಾಘವೇಂದ್ರ ಭಟ್ ಅಧ್ಯಕ್ಷರು ರೋಟರಿ ಉಡುಪಿ ಮಿಡ್ಟೌನ್ ಇವರು ಅಭಿಪ್ರಾಯ ಪಟ್ಟರು.

ಅವರು ಅಭಿವೃದ್ಧಿ ಸಂಸ್ಥೆ (ರಿ.) ಬಾಳ್ಕುದ್ರು ಹಂಗಾರಕಟ್ಟೆ ರೋಟರಿ ಉಡುಪಿ ಮಿಡ್ಟೌನ್, ಸರಕಾರಿ ಪ್ರೌಢಶಾಲೆ ಉಪ್ಪೂರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಥೆ ಕವನ ರಚನಾ ಕಾರ್ಯಾಗಾರ 2025 ಉದ್ಘಾಟಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ಶ್ರೀಮತಿ ಶಾರದಾ ಅಂಪಾರು ಮತ್ತು ಶ್ರೀಮತಿ ಶೋಭಾ ಹರಿಪ್ರಸಾದ್ ಉಡುಪಿ, ಮಕ್ಕಳನ್ನು 2 ಗುಂಪುಗಳಾಗಿ ವಿಂಗಡಿಸಿ, ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಪ್ರಜ್ಞೆ ಬೆಳೆಸಿದಾಗ ಅವರಲ್ಲಿ ಆಸಕ್ತಿ ಮೂಡಿ, ಬರೆಯಲು ಪ್ರೇರೆಪಿಸುತ್ತದೆ ಎಂದು ತಿಳಿಸಿದರು. ಸುಮಾರು 40ಕ್ಕೂ ಹೆಚ್ಚು ಕಥೆ, 45ಕ್ಕೂ ಹೆಚ್ಚು ಕವನವನ್ನು ವಿದ್ಯಾರ್ಥಿಗಳು ರಚಿಸಿದರು.

ಸಭಾಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ರತ್ನಾಕರ ಮೊಗವೀರ ವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ದೈಹಿಕ ಶಿಕ್ಷಕರಾದ ಗ್ರೆಗರಿ ಡಿಸಿಲ್ವ ಜಾತಾಬೆಟ್ಟು, ರೋ| ಎಚ್. ಜಗನ್ನಾಥ ಶೆಟ್ಟಿ, ರೋ| ರಾಮದೇವ ಕಾರಂತ್, ರಮೇಶ್ ವಕ್ವಾಡಿ, ಸಂಧ್ಯಾ, ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಶಾರದಾ ಅಂಪಾರು ಹಾಗೂ ಶ್ರೀಮತಿ ಶೋಭಾ ಹರಿಪ್ರಸಾದ್ ಉಡುಪಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಶ್ರೀಮತಿ ದಿವ್ಯ ಉಡುಪಿ ನಿರೂಪಿಸಿ ಮುಖ್ಯ ಶಿಕ್ಷಕಿ ಶ್ರೀಮತಿ ಸಂಧ್ಯಾ ಸರಸ್ವತಿ ಸ್ವಾಗತಿಸಿದರು. ರಮೇಶ್ ವಕ್ವಾಡಿ ಪ್ರಾಸ್ತಾವನೆ ಮಾಡಿ ವಂದಿಸಿದರು. ಸುಮಾರು 85 ವಿದ್ಯಾರ್ಥಿಗಳು ಈ ಶಿಬಿರದಿಂದ ಪ್ರಯೋಜನ ಪಡೆದರು.



