ಉಡುಪಿ : ಪಳ್ಳಿ–ಅಡಪಾಡಿ ರಸ್ತೆ ಹಂಪನಕಟ್ಟೆ ಸಮೀಪ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ. ಮೃತರನ್ನು ಹಿರಿಯಡ್ಕ ಕುಜಂಬೈಲು ನಿವಾಸಿ ಗಣೇಶ್ ನಾಯಕ್ (27) ಎಂದು ಗುರುತಿಸಲಾಗಿದೆ.

ಮಾರ್ಚ್ 19ರಂದು ಗಣೇಶ್ ನಾಯಕ್ ಅವರು ಬೈಕ್ನಲ್ಲಿ ಹಂಪನಕಟ್ಟೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಟಿಪ್ಪರ್ ಲಾರಿ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮವಾಗಿ ಗಣೇಶ್ ನಾಯಕ್ ರಸ್ತೆ ಮೇಲೆ ಬಿದ್ದಿದ್ದು, ಆ ಸಂದರ್ಭದಲ್ಲಿ ಲಾರಿಯ ಹಿಂಬದಿಯ ಚಕ್ರವು ಹೆಲ್ಮೆಟ್ ಧರಿಸಿದ್ದ ಅವರ ತಲೆಯ ಮೇಲೆಯೇ ಹರಿದಿದೆ. ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಟಿಪ್ಪರ್ ಲಾರಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.



