ಉಡುಪಿ: ಈ ವರ್ಷದ ಭಾರತದಲ್ಲಿ ಕಾಣಿಸಿಕೊಳ್ಳುವ ಏಕೈಕ ಚಂದ್ರ ಗ್ರಹಣದ ಕುರಿತು ಖ್ಯಾತ ಖಗೋಳ ವಿಜ್ಞಾನಿ ಡಾ. ಎಪಿ ಭಟ್ ಮಾಹಿತಿ ನೀಡಿದ್ದಾರೆ. ಖಗ್ರಾಸ ಚಂದ್ರ ಗ್ರಹಣ ನಡೆಯುವುದು ನಿಜ. ಆದರೆ ಭಾರತದವರಿಗೆ ಇದು ಸಂಪೂರ್ಣವಾಗಿ ವಿಸ್ಮಯಕಾರಿಯಾಗಿ ಗೋಚರಿಸುವುದಿಲ್ಲ. ಕೇವಲ 8 ರಿಂದ 15 ಶೇಕಡ ಮಾತ್ರ ಕಾಣಿಸುತ್ತದೆ. ಮಧ್ಯಾಹ್ನ 3.20ಕ್ಕೆ ಗ್ರಹಣ ಆರಂಭವಾಗುತ್ತದೆ. ಸಂಜೆ 4.34ಕ್ಕೆ ಖಗ್ರಾಸ ಹಂತ ಪ್ರಾರಂಭವಾಗಿ 5.32ಕ್ಕೆ ಮುಗಿಯುತ್ತದೆ. ಸಂಪೂರ್ಣ ಗ್ರಹಣ 6.47ಕ್ಕೆ ಅಂತ್ಯಗೊಳ್ಳುತ್ತದೆ. ಆದರೆ ನಮ್ಮ ಭಾಗದಲ್ಲಿ ಚಂದ್ರೋದಯ 6.38ಕ್ಕೆ ಆಗುವುದರಿಂದ 6.38ರಿಂದ 6.47ರವರೆಗೆ ಕೇವಲ 9 ನಿಮಿಷ ಮಾತ್ರ ಗ್ರಹಣಗೊಂಡ ಚಂದ್ರನನ್ನು ನೋಡುವ ಅವಕಾಶ ಸಿಗುತ್ತದೆ ಎಂದಿದ್ದಾರೆ.

ಚಂದ್ರ ಗ್ರಹಣವು ಸೂರ್ಯಗ್ರಹಣದಷ್ಟು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ನಿಧಾನವಾಗಿ ಮರೆಮಾಚುವ ಈ ಪ್ರಕ್ರಿಯೆ ನೋಡುವಷ್ಟರಲ್ಲಿ ಮುಗಿದಂತೆ ಆಗುತ್ತದೆ. ಬರಿಯ ಕಣ್ಣಿನಿಂದಲೇ ಇದನ್ನು ನೋಡುವುದು ಸುರಕ್ಷಿತ. ದೂರದರ್ಶಕ ಬಳಸಿದರೂ ಹೆಚ್ಚೇನು ವ್ಯತ್ಯಾಸ ಕಾಣುವುದಿಲ್ಲ. ಗ್ರಹಣ ಹೌದಾ ಎಂದು ತಿಳಿಯುವಷ್ಟರಲ್ಲಿ ಅದು ಅಂತ್ಯ ಹಂತದಲ್ಲಿರುತ್ತದೆ. ಭಾರತದ ಪೂರ್ವ ತೀರ ಪ್ರದೇಶದಲ್ಲಿ ಸುಮಾರು 15 ಶೇಕಡದವರೆಗೆ ಗೋಚರಿಸಬಹುದು. ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಖಗ್ರಾಸ ಸ್ಪಷ್ಟವಾಗಿ ಕಾಣಿಸಲಿದೆ. ಉತ್ತರ ಅಮೆರಿಕಾ ಹಾಗೂ ಕೆನಡಾದವರೆಗೂ ಈ ಗ್ರಹಣ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ. ಮಂಗಳವಾರ ಸೂಪರ್ ಮೂನ್ ಇರುವುದಿಲ್ಲ. ಆದರೆ ಚಂದ್ರನ ಗಾತ್ರ ಸ್ವಲ್ಪ ಹೆಚ್ಚಾಗಿ ಕಾಣಬಹುದು. ಹೋಳಿ ಹುಣ್ಣಿಮೆ ದಿನವಾಗಿರುವುದರಿಂದ ಸಂಪ್ರದಾಯದಂತೆ ಹೋಳಿಗೆ ಊಟ ಮಾಡಬಹುದು. ಗ್ರಹಣ ಎಂದರೆ ಭಯ ಬೇಡ. ಇದು ಪ್ರಕೃತಿಯ ಸುಂದರ ವಿದ್ಯಮಾನ ಎಂದಿದ್ದಾರೆ.

ವೈಜ್ಞಾನಿಕವಾಗಿ ವಿವರಿಸಿದ ಅವರು, ಬೆಳಕು ಸರಳ ರೇಖೆಯಲ್ಲಿ ಸಂಚರಿಸುತ್ತದೆ. ಭೂಮಿ ಮತ್ತು ಸೂರ್ಯನ ನಡುವಿನ ದೂರ ಸುಮಾರು 15 ಕೋಟಿ ಕಿಲೋಮೀಟರ್, ಭೂಮಿ ಮತ್ತು ಚಂದ್ರನ ನಡುವಿನ ದೂರ ಸುಮಾರು 3.84 ಲಕ್ಷ ಕಿಲೋಮೀಟರ್.

ಈ ಬೆಳಕು-ನೆರಳಿನ ಆಟವೇ ಗ್ರಹಣ. ಸಮುದ್ರದ ಮಟ್ಟ ಏರಿಕೆ ಸಹಜ. ಅಲೆಗಳಲ್ಲಿ ಭರತ-ಇಳಿತಗಳು ಹುಣ್ಣಿಮೆ ಹಾಗೂ ಅಮಾವಾಸ್ಯೆ ಸಂದರ್ಭದಲ್ಲೂ ನಡೆಯುತ್ತವೆ. ಗ್ರಹಣದ ಕಾರಣದಿಂದ ಯಾವುದೇ ವಿಶೇಷ ವ್ಯತ್ಯಾಸ ಉಂಟಾಗುವುದಿಲ್ಲ. ಹೊಸ ಕಿರಣಗಳು ಅಥವಾ ವಿಶೇಷ ಅಲೆಗಳು ಬರುವುದಿಲ್ಲ. “ಯಾರು ಕೂಡ ಹೆದರಬೇಕಾಗಿಲ್ಲ. ಸೂರ್ಯನ ತಾಪಮಾನವೇ ಈಗ ಹೆಚ್ಚಾಗಿದೆ ಎಂದು ಡಾ. ಭಟ್ ಹೇಳಿದ್ದಾರೆ.



