ಪ್ರಯಾಗ್ರಾಜ್: ಜನವರಿ 13 ರಿಂದ ಮಹಾಕುಂಭ ಮೇಳ ಆರಂಭಗೊಂಡಿದ್ದು, ಕೋಟ್ಯಾಂತರ ಭಕ್ತರು ಪುಣ್ಯಸ್ಥಳಕ್ಕೆ ಬಂದು ಪವಿತ್ರಸ್ನಾನ ಮಾಡುತ್ತಿದ್ದಾರೆ. ಹೀಗೆ ಬರುವ ಭಕ್ತರಿಗೆ ಆಹಾರ, ಕುಡಿಯಲು ನೀರಿನ ವ್ಯವಸ್ಥೆಯನ್ನು ಕೂಡಾ ಮಾಡಲಾಗಿದೆ. ಆದರೆ ಇಲ್ಲೊಬ್ಬ ಪೊಲೀಸ್ ಅಧಿಕಾರಿ ಭಕ್ತರಿಗೆಂದು ತಯಾರು ಮಾಡಲಾಗುತ್ತಿದ್ದ ಅಡುಗೆಗೆ ಬೂದಿ ಎರಚಿರುವ ಅಮಾನವೀಯ ಘಟನೆಯೊಂದು ನಡೆದಿದೆ. ಇದರ ವೀಡಿಯೋ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದು, ಘಟನೆ ಕುರಿತು ತನಿಖೆ ನಡೆಸಲು ಆದೇಶ ನೀಡಿರುವುದಾಗಿ ಹೇಳಲಾಗಿದೆ.