ಉಡುಪಿ : ಉಡುಪಿ ಜಿಲ್ಲೆಯಲ್ಲಿ ಪ್ರಿ ಮಾನ್ಸೂನ್ ಇಫೆಕ್ಟ್ ಆರಂಭವಾಗಿದ್ದು, ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಸಂಜೆ ವೇಳೆ ವೇಳೆ ಮಳೆಯಾಗುತ್ತಿದೆ. ಈ ಸಂದರ್ಭದಲ್ಲಿ ಉಡುಪಿ ನಗರ ಸಭೆಯ ನಿದ್ದೆಯಿಂದ ಎದ್ದು ಕುಳಿತಿದೆ. ಹಲವು ವರ್ಷಗಳಿಂದ ಉಡುಪಿ ನಗರ ವ್ಯಾಪ್ತಿಯಲ್ಲಿರುವ ಜನ ಮೂಲಗಳನ್ನು ಅಭಿವೃದ್ಧಿ ಪಡಿಸಬೇಕು ಎನ್ನುವ ಒತ್ತಾಯ ಕೇಳಿ ಬರುತ್ತಲೆ ಇದೆ. ಇದಕ್ಕೆ ಯಾವುದೇ ಸ್ಪಂದನೇ ನೀಡಿದ ನಗರಸಭೆ ಈ ಬಾರಿ ಉಡುಪಿ ನಗರದ ಹೃದಯಭಾಗದಲ್ಲಿರುವ ಬ್ರಹ್ಮಗಿರಿ ನಾಯರ್ ಕೆರೆಗೆ ಮರುಜೀವ ನೀಡುವ ಕಾರ್ಯಕ್ಕೆ ಕೈಹಾಕಿದೆ.

ಉಡುಪಿಯ ಬ್ರಹ್ಮಗಿರಿ ವೃತ್ತದ ಬಳಿ ಇರುವ ಐತಿಹಾಸಿಕ ಹಿನ್ನಲೆಯುಳ್ಳ ನಾಯರ್ ಕೆರೆ, ಹದಿಮೂರು ವರ್ಷಗಳಿಂದ ಯಾವುದೇ ಕಾಯಕಲ್ಪವಿಲ್ಲದೆ ಕಳೆಗುಂದಿತ್ತು. ಕೆರೆಯ ಸ್ವಚ್ಚತೆಗೆ ಬಹಳ ವರ್ಷಗಳಿಂದ ಬೇಡಿಕೆಯಿದ್ದ ಹಿನ್ನಲೆ ನಗರಸಭೆ ಕೊನೆಗೂ ಕಾಯಕಲ್ಪ ನೀಡಿದೆ. ಅಂತರ್ಜಲ ವೃದ್ಧಿಗಾಗಿ ಮತ್ತು ಶುಚಿತ್ವ ಸಾಂಕ್ರಾಮಿಕ ರೋಗಗಳು ಹರಡದಂತೆ ಕೆರೆಯ ಹೂಳು ತೆಗೆದು ಮರುಜೀವ ಕೊಡುವ ಕೆಲಸ ನಡೆಯುತ್ತಿದೆ. ಬ್ರಹ್ಮಗಿರಿ, ನಾಯರ್ ಕೆರೆ ಪ್ರದೇಶದ ಸುತ್ತಮುತ್ತಲಿನ ನಿವಾಸಿಗಳ ಬಳಕೆಗೆ ರಚಿಸಿದ್ದ ಕೆರೆ, ಬೆಳೆಯುತ್ತಿರುವ ನಗರ ವೇಗ ನಡುವೆ ಅಭಿವೃದ್ಧಿ ಕಾಣದೇ ಹಿಂದೆ ಉಳಿದಿತ್ತು.

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಸೇರಿದಂತೆ ಬಹಳಷ್ಟು ಯುವಕರು, ಮಕ್ಕಳು ಈಜಾಡುತ್ತಿದ್ದ ಕೆರೆ ದಿನಹೋದಂತೆ ಹೂಳು ತುಂಬಿಕೊಂಡು, ಈಜುವ ಸಂದರ್ಭದಲ್ಲಿ ಅವಘಡಗಳು ಸಂಭವಿಸಿತ್ತು. ತದನಂತರದಲ್ಲಿ ನಗರ ಮಧ್ಯದಲ್ಲಿರುವ ಹೂಳು ತುಂಬಿದ ಪಾಳುಬಿದ್ದ ಕೆರೆಯಾಗಿ, ಸೊಳ್ಳೆ ಉತ್ಪತ್ತಿ ತಾಣವೂ ಆಗಿತ್ತು. ಸದ್ಯ ಸ್ಥಳೀಯ ನಿವಾಸಿಗಳ ಹಲವು ಮನವಿ ಬಳಿಕ ಕೆರೆಯ ಹೂಳು ತೆಗೆದು ಮರುಜೀವ ನೀಡುವ ಕೆಲಸ ಭರದಿಂದ ಸಾಗಿದೆ.