ಉಡುಪಿ : ನಗರದ ಬ್ರಹ್ಮಗಿರಿಯ ಓಸ್ಕರ್ ಫೆರ್ನಾಂಡೀಸ್ ವೃತ್ತಕ್ಕೆ ಹೆಚ್ಚು ಬೆಳಕು ಪಸರಿಸುವ ಹೈಮಾಸ್ಕ್ ದಾರಿದೀಪ ಅಳವಡಿಸುವಂತೆ ನಾಗರೀಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ.

ಐದು ಪ್ರಮುಖ ರಸ್ತೆಗಳು ಕೂಡುವ ಈ ವೃತ್ತವು ವಾಹನ ಹಾಗೂ ಜನಸಂಚಾರ ಹೆಚ್ಚಿರುವ ಪ್ರದೇಶವಾಗಿದ್ದು, ನಗರಕ್ಕೆ ಆಗಮಿಸುವ ಗಣ್ಯ ಅತಿಥಿಗಳು ಪ್ರವಾಸಿ ಮಂದಿರಕ್ಕೆ ತೆರಳುವ ಪ್ರಮುಖ ಮಾರ್ಗವೂ ಆಗಿದೆ.

ಪ್ರಸ್ತುತ ಇರುವ ದಾರಿದೀಪಗಳು ವಿಶಾಲ ವೃತ್ತಕ್ಕೆ ಸಮರ್ಪಕ ಬೆಳಕು ನೀಡುತ್ತಿಲ್ಲ. ಇದರಿಂದ ರಾತ್ರಿ ವೇಳೆ ವಾಹನ ಮತ್ತು ಜನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂಬ ಸಾರ್ವಜನಿಕರ ದೂರುಗಳು ಹೆಚ್ಚಿವೆ.

ಆದ್ದರಿಂದ, ವೃತ್ತದ ಸೌಂದರೀಕರಣ ಹಾಗೂ ಸುರಕ್ಷಿತ ಸಂಚಾರದ ಹಿತದೃಷ್ಟಿಯಿಂದ ತುರ್ತಾಗಿ ಹೈಮಾಸ್ಕ್ ದಾರಿದೀಪ ಅಳವಡಿಸಲು ನಗರಾಡಳಿತ ಕ್ರಮ ಕೈಗೊಳ್ಳಬೇಕು ಎಂದು ನಿತ್ಯಾನಂದ ಒಳಕಾಡು ಮನವಿ ಮಾಡಿದ್ದಾರೆ.



