ಉಡುಪಿ : ಬೈಂದೂರು ಗೊಳಿಹೋಳೆ ಗ್ರಾಮದ ಬಡ್ಕಿ ಪ್ರದೇಶದಲ್ಲಿ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೋಜ ಮೊಗವೀರ (43) ಬಂಧಿತ ಆರೋಪಿ.

ಬೈಂದೂರು ಪೊಲೀಸ್ ಉಪನಿರೀಕ್ಷಕ ತಿಮ್ಮೇಶ ಬಿ.ಎನ್. ಹಾಗೂ ಸಿಬ್ಬಂದಿ ಸ್ಥಳೀಯರ ಮಾಹಿತಿ ಮೇರೆಗೆ ಧಾಳಿ ನಡೆಸಿದಾಗ, ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾಗಿದೆ. ಪರಿಶೀಲನೆ ನಡೆಸಿದಾಗ ಸುಮಾರು 60 ಅಡಿ ಉದ್ದ, 40 ಅಡಿ ಅಗಲ ಮತ್ತು 3 ಅಡಿ ಆಳದ ಪ್ರದೇಶದಲ್ಲಿ ಗಣಿಗಾರಿಕೆ ನಡೆದಿರುವುದು ದೃಢಪಟ್ಟಿದೆ. ಸ್ಥಳದಲ್ಲಿ ಕಲ್ಲು ಕಟ್ಟಿಂಗ್ ಟಿಲ್ಲರ್ ಇನ್ನಿತರ ವಸ್ತುಗಳು ಪತ್ತೆಯಾಗಿದೆ.

ಸ್ಥಳದಲ್ಲಿ ಒಟ್ಟು 35,500 ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಮನೋಜ ಮೊಗವೀರ ಅವರು ಯಾವುದೇ ಪರವಾನಿಗೆ ಪಡೆಯದೇ ಸುಮಾರು 300 ಕೆಂಪು ಕಲ್ಲುಗಳನ್ನು ಅಕ್ರಮವಾಗಿ ತೆಗೆಯಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದು, ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


