ಕುಂದಾಪುರ: ಎಕ್ಸಲೆಂಟ್ ಹೈಸ್ಕೂಲು ಸುಣ್ಣಾರಿ, ಕುಂದಾಪುರ ಇದರ ಆಶ್ರಯದಲ್ಲಿ ಆಯೋಜಿಸಲಾದ ಚಿಣ್ಣರ ಅಂಗಳದ ಬೇಸಿಗೆ ಶಿಬಿರವಾದ ‘ ಬೆಸುಗೆ’ ಕಾರ್ಯಕ್ರಮವು ಎಂಟು ದಿನಗಳ ಕಾಲ ಬಹಳ ಸಾಂಸ್ಕೃತಿಕ ವೈಭವಗಳೊಂದಿಗೆ ಸಮಾರೋಪಗೊಂಡಿತು. ಈ ಶಿಬಿರವು 200 ವಿದ್ಯಾರ್ಥಿಗಳ ಸೇರ್ಪಡೆಯ ನಿರೀಕ್ಷೆಯನ್ನು ಇಟ್ಟುಕೊಂಡು ಪ್ರಾರಂಭಿಸಲು ಯೋಜನೆ ಹಾಕಿಕೊಂಡರೂ, ನಿರೀಕ್ಷೆಗೂ ಮೀರಿ 250 ಕ್ಕಿಂತಲೂ ಅಧಿಕ ಚಿಣ್ಣರೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿಬಂದಿತು.

ಈ ಸಮಾರೋಪ ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ನೀಡಲು ಹಾಗೂ ಚಿಣ್ಣರ ಜೊತೆ ಹಾಸ್ಯದ ಹೊನಲನ್ನು ಹರಿಸಲು ಅತಿಥಿ ಅಭ್ಯಾಗತರಾಗಿ ಆಗಮಿಸಿದ ಕರಾವಳಿ ಕುಂದಾಪುರದ ಕುಂದಗನ್ನಡದ ಹರಿಕಾರ ಹಾಗೂ ರಾಯಭಾರಿ ಮನು ಹಂದಾಡಿ ಆಗಮಿಸಿ ಈ ಸಮಾರೋಪ ಕಾರ್ಯಕ್ರಮದಲ್ಲಿ ಚಿಣ್ಣರ ಬಳಗದೊಂದಿಗೆ ರಸವತ್ತಾದ ಕುಂದಗನ್ನಡದಲ್ಲಿ ಹಾಸ್ಯ ಚಟಾಕಿಯ ಮೂಲಕ ನಗುವಿನ ಅಲೆಯನ್ನು ಎಬ್ಬಿಸಿದರು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಎಂ. ಮಹೇಶ್ ಹೆಗ್ಡೆ ಯವರು ಮಾತನಾಡಿ, ಎಕ್ಸಲೆಂಟ್ ಸಂಸ್ಥೆಯ ಹಲವಾರು ಕಾರ್ಯಕ್ರಮಗಳು ಹಾಗೂ ಮುಂದಿನ ವರ್ಷದಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಯೋಜನೆಗಳ ಕುರಿತು ಚಿಣ್ಣರಿಗೆ ಮನತಟ್ಟುವಂತೆ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು.
ಎಕ್ಸಲೆಂಟ್ ಸಂಸ್ಥೆಯ ಪ್ರಾಂಶುಪಾಲರಾದ ನಾಗರಾಜ ಶೆಟ್ಟಿ ಮಾತನಾಡಿ, ಚಿಣ್ಣರ ಲವಲವಿಕೆಯ ಅತ್ಯುತ್ತಮ ಹವ್ಯಾಸಗಳ ಕುರಿತು ಮನತುಂಬಿ ಪ್ರಶಂಸಿಸಿದರು. ಈ ಸಂಧರ್ಭದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆಯಾಗಿರುವ ದಿವ್ಯಾ ಶೆಟ್ಟಿ ಮಾತನಾಡಿ, ಚಿಣ್ಣರಿಗೆ ಬದುಕಿನ ಸುಂದರ ಕಥೆಗಳ ಮೂಲಕ ಹೊಸ ಪರಿಸರಕ್ಕೆ ಹೇಗೆ ಹೊಂದಿಕೊಳ್ಳಬೇಕೆನ್ನುವ ಕುರಿತು ಸರಳವಾಗಿ ತಿಳಿಸಿದರು.
ಈ ಕಾರ್ಯಕ್ರಮದ ಯಶಸ್ವಿಯ ರೂವಾರಿ ಎಕ್ಸಲೆಂಟ್ ಹೈಸ್ಕೂಲ್ನ ಮುಖ್ಯೋಪಾಧ್ಯಾಯಿನಿ ಸರೋಜಿನಿ. ಪಿ. ಆಚಾರ್ಯ ಧನ್ಯವಾದಗಳನ್ನು ಸಮರ್ಪಿಸಿದರು. ಹಿಂದಿ ಶಿಕ್ಷಕಿ ಉಷಾಲತಾ ಸರ್ವರನ್ನು ಸ್ವಾಗತಿಸಿದರು. ಕನ್ನಡ ಶಿಕ್ಷಕ ಸಂದೀಪ್ ಸಮಾರೋಪ ಕಾರ್ಯಕ್ರಮವನ್ನು ನಿರೂಪಿಸಿದರು.