ಉಡುಪಿ : ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ ವತಿಯಿಂದ ಹಾರ್ದಳ್ಳಿ–ಮಂಡಳ್ಳಿ ಗ್ರಾಮ ಪಂಚಾಯತ್ ಆವರಣದಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಕಿಶೋರ ಯಕ್ಷಗಾನ ಸಂಭ್ರಮ ಕಾರ್ಯಕ್ರಮ ಯಶಸ್ವಿಯಾಗಿ ಸಮಾಪನಗೊಂಡಿತು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಎಚ್. ಶಂಕರ ಹೆಗ್ಡೆ ಮಾತನಾಡಿ, ಯಕ್ಷಶಿಕ್ಷಣ ಟ್ರಸ್ಟ್ ಮೂಲಕ ನಮ್ಮೂರಿನ ಮಕ್ಕಳಿಗೆ ಅತ್ಯುತ್ತಮ ಅವಕಾಶ ಒದಗಿದೆ. ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡ ರೀತಿ ಸಂತೋಷ ತಂದಿದೆ. ಗ್ರಾಮಸ್ಥರು ಹಬ್ಬದಂತೆ ಕಾರ್ಯಕ್ರಮವನ್ನು ಆಚರಿಸಿದ್ದು, ನಮ್ಮ ಕಲೆಯನ್ನು ಪ್ರೋತ್ಸಾಹಿಸುವುದು ಎಲ್ಲರ ಕರ್ತವ್ಯ ಎಂದರು.

ಶಾಲಾ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿ ಯಕ್ಷಗಾನ ಕಲಾರಂಗದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಇದು ಅನನ್ಯ ಸಂಘಟನೆ ಎಂದರು. ಇಂಜಿನಿಯರ್ ಪ್ರಶಾಂತ್ ಮಳವಳ್ಳಿ ಹಾಗೂ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಹಾಗೂ ಹಿರಿಯ ಕಾರ್ಯಕರ್ತ ಯು.ಎಸ್. ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ಮಂದಾರ ಉಡುಪ, ವಿಘ್ನೇಶ್, ತನಿಷಾ, ರಕ್ಷಿತಾ, ಅಕ್ಷತಾ ಹಾಗೂ ಸಮೀಕ್ಷಾ ಯಕ್ಷಗಾನ ಕಲಿಕೆಯಿಂದ ತಮಗಾದ ಅನುಭವವನ್ನು ಹಂಚಿಕೊಂಡರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್ ಕಟ್ಟೆ ವಿದ್ಯಾರ್ಥಿಗಳಿಂದ ದ್ರೌಪದಿ ಪ್ರತಾಪ ಯಕ್ಷಗಾನ ಪ್ರದರ್ಶನ ಮನಮೋಹಕವಾಗಿ ನಡೆಯಿತು. ಜಯಪ್ರಕಾಶ ಶೆಟ್ಟಿ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ದಯಾನಂದ ಮಳವಳ್ಳಿ ಹಾಗೂ ರಂಜಿತ್ ಸಹಕರಿಸಿದರು.



