ಉಡುಪಿ: ಬಿಜೆಪಿ ಯುವ ಮೋರ್ಚಾದ ಜಿಲ್ಲಾಧ್ಯಕ್ಷರು ನಿರ್ವಹಿಸುತ್ತಿರುವ ರೆಸಾರ್ಟ್ನಲ್ಲಿ ಮಾನ್ಯ ದಾಖಲೆಗಳಿಲ್ಲದ ವಿದೇಶಿಗಳನ್ನು ಅಕ್ರಮವಾಗಿ ಕೆಲಸಕ್ಕೆ ಇಟ್ಟಿರುವ ಗಂಭೀರ ಆರೋಪಗಳ ಕುರಿತು ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆ ನಡೆಯಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.

ರಾಜ್ಯದ ಯಾವುದೇ ಭಾಗದಲ್ಲಿ ಅಕ್ರಮ ವಿದೇಶಿ ನುಸುಳುಕೋರರ ಬಂಧನವಾದರೆ ಕಾಂಗ್ರೆಸ್ ವಿರುದ್ಧ ಆರೋಪಿಸುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಮ್ಮದೇ ಪಕ್ಷದ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪ್ರಥ್ವಿರಾಜ್ ಶೆಟ್ಟಿ ಸಂಬಂಧಿಸಿದ ಪ್ರಕರಣದಲ್ಲಿ ಮೌನ ವಹಿಸಿರುವುದು ಏಕೆ ಎಂದು ಅವರು ಪ್ರಶ್ನಿಸಿದರು. ದೇಶದ ಭದ್ರತೆಗೆ ಅಪಾಯ ಉಂಟುಮಾಡುವ ಈ ದೇಶದ್ರೋಹ ಪ್ರಕರಣವನ್ನು ಸಮರ್ಥಿಸಿಕೊಳ್ಳುವರೇ ಎಂದು ಶಾಸಕರನ್ನು ಪ್ರಶ್ನಿಸಿದ್ದಾರೆ.

ಬಿಜೆಪಿ ನಾಯಕರು ದೇಶಭಕ್ತಿಯ ಮಾತು ಹೇಳಿ, ಅಕ್ರಮಗಳ ವಿಚಾರದಲ್ಲಿ ಮೌನ ವಹಿಸುತ್ತಿರುವುದು ವಿಪರ್ಯಾಸವೆಂದು ಟೀಕಿಸಿದ ಅವರು, ಈ ಹಿಂದೆ ಬ್ರಹ್ಮಾವರದಲ್ಲಿ ಬಿಜೆಪಿ ಯುವ ಮುಖಂಡರ ಮನೆಯಲ್ಲಿ ಅಕ್ರಮ ಪಟಾಕಿ ದಾಸ್ತಾನು ಪ್ರಕರಣ ಬೆಳಕಿಗೆ ಬಂದಿದ್ದುದನ್ನೂ ಸ್ಮರಿಸಿದರು. ಇತ್ತೀಚೆಗೆ ಮಲ್ಪೆ–ಕೊಚ್ಚಿನ್ ಶಿಪ್ಯಾರ್ಡ್ಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಿಂದ ಬಂದ ಕಾರ್ಮಿಕರು ನೌಕಾ ಗೌಪ್ಯ ಮಾಹಿತಿ ಪಾಕಿಸ್ತಾನಕ್ಕೆ ರವಾನಿಸಿದ ಪ್ರಕರಣದ ಹಿನ್ನೆಲೆಯಲ್ಲೂ ಬಿಜೆಪಿಯ ಮೌನವಹಸಿದೆ. ಈ ಎಲ್ಲ ವಿಚಾರಗಳನ್ನು ಗಮನಿಸಿ, ಅಕ್ರಮ ವಿದೇಶಿಗಳಿಗೆ ಆಶ್ರಯ–ಉದ್ಯೋಗ ನೀಡಿದ ಆರೋಪಗಳ ಕುರಿತು ಪೊಲೀಸ್ ಇಲಾಖೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಮೇಶ್ ಕಾಂಚನ್ ಒತ್ತಾಯಿಸಿದ್ದಾರೆ.



