ಉಡುಪಿ : ಉಡುಪಿ ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ರಘುಪತಿ ಭಟ್ ಅವರು ಪಕ್ಷದ ಒಳಗಿನ ಅಸಮಾಧಾನವನ್ನು ಬಯಲು ಮಾಡಿದ್ದಾರೆ. ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರ ಬಗ್ಗೆ ನೇರವಾಗಿ ಟೀಕೆ ಮಾಡದೇ, ಆದರೆ ಪರೋಕ್ಷವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅವರು ಮಂಗಳವಾರದಂದು ತಮ್ಮ ನಿವಾಸದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ನನಗೆ ಬಿ.ಎಲ್ ಸಂತೋಷ್ ಅವರ ಬಗ್ಗೆ ಗೌರವ ಇದೆ, ಆದರೆ ಸಂಯಮ ಕೇವಲ ಉಡುಪಿ ಜಿಲ್ಲೆಯ ಕಾರ್ಯಕರ್ತರಿಗೆ ಮಾತ್ರವೇ? ಅದು ಹಿರಿಯ ನಾಯಕರಿಗೂ ಅನ್ವಯಿಸಬೇಕು. ಸಂಯಮದಿಂದ ವಿಜಯೇಂದ್ರ ಅವರಿಗೆ ಅಧಿಕಾರ ತ್ಯಜಿಸಲು ಹೇಳಿ, ಮುಂದಿನ ಚುನಾವಣೆ ನಿಲ್ಲದೆ ರಾಜ್ಯ ಪ್ರವಾಸ ಮಾಡಲಿ. ಅಪ್ಪ ಮತ್ತು ಇಬ್ಬರು ಮಕ್ಕಳು ಅಧಿಕಾರದಿಂದ ದೂರವಿರಲಿ, ಆಗ ಅವರ ಸಂಯಮದ ಮಾತು ಒಪ್ಪುತ್ತೇನೆ. ನನ್ನಲ್ಲಿ ಸಂಯಮ ಇದೆ. 2013ರಲ್ಲಿ ಟಿಕೆಟ್ ಸಿಗದಿದ್ದರೂ, ಕಳೆದ ಚುನಾವಣೆಯಲ್ಲಿಯೂ ಸಿಗದಿದ್ದರೂ ಸಂಯಮ ಕಳೆದುಕೊಂಡಿಲ್ಲ. ನಾನು ಟಿಕೆಟ್ ಸಿಗದ ಅಭ್ಯರ್ಥಿಯನ್ನು ನನ್ನ ಕಾರಿನಲ್ಲಿ ಕುಳ್ಳಿರಿಸಿ ಗೆಲ್ಲಿಸಿದ್ದೇನೆ. ನನ್ನ ಹೆಂಡತಿಯನ್ನು ಫೀಲ್ಡ್ಗೆ ಕಳಿಸಿ ಕೆಲಸ ಮಾಡಿಸಿದ್ದೇನೆ. ಮೂರು ಬಾರಿ ಶಾಸಕನಾಗಿ ಅಧಿಕಾರವಿಲ್ಲದೆ ಕುಳಿತಿದ್ದೇನೆ. ಆದರೂ ನಾನು ಪಕ್ಷಕ್ಕೆ ನಿಷ್ಠೆಯಿಂದ ಬದ್ಧನಾಗಿದ್ದೇನೆ ಎಂದರು.

ಪಕ್ಷದ ನಾಯಕರ ವಿರುದ್ಧ ನೇರ ಅಸಮಾಧಾನ ವ್ಯಕ್ತಪಡಿಸಿದ ಅವರು, ನನ್ನನ್ನು ಯಾವುದೇ ಸಭೆಗಳಿಗೆ ಆಹ್ವಾನಿಸುತ್ತಿಲ್ಲ, ಜಿಲ್ಲಾ ಕಚೇರಿ ಶಂಕುಸ್ಥಾಪನೆಗೂ ಕರೆದಿಲ್ಲ. ಸಂತೋಷ್ ಜಿ ಬರುವಾಗಲೂ ಆಹ್ವಾನ ಇಲ್ಲ. ಆಹ್ವಾನ ಕೊಟ್ಟಿದ್ದರೆ ಖಂಡಿತ ಹೋಗುತ್ತಿದ್ದೆ, ಪಕ್ಷದ ವಿರುದ್ಧ ಬೈದವರನ್ನೂ, ಮೋದಿ ಮತ್ತು ಸಂತೋಷ್ ಜಿ ವಿರುದ್ಧ ಟೀಕೆ ಮಾಡಿದವರನ್ನೂ ಪಕ್ಷಕ್ಕೆ ಮತ್ತೆ ಕರೆತರುತ್ತಾರೆ. ಅವರು ಎಂ.ಪಿ., ಸಚಿವರಾಗುತ್ತಾರೆ. ಆದರೆ ನಾನು ಪಕ್ಷವನ್ನು ಯಾವತ್ತೂ ಬೈದಿಲ್ಲ. ನನ್ನ ಶಿಕ್ಷೆ ಮಾತ್ರ ಇನ್ನೂ ಮುಂದುವರಿದಿದೆ. ನಾನು ರಾಜಕೀಯ ಕುಟುಂಬದಿಂದ ಬಂದವನು ಅಲ್ಲ. ಆದರೆ ಮೂರು ಬಾರಿ ಶಾಸಕನಾಗಿದ್ದೇನೆ. ನನ್ನ ಯುವಕಾಲ, ವ್ಯವಹಾರ, ಕುಟುಂಬ ಎಲ್ಲವನ್ನೂ ಪಕ್ಷಕ್ಕಾಗಿ ಮುಡಿಪಾಗಿಟ್ಟಿದ್ದೇನೆ. ಪಕ್ಷ ನನ್ನನ್ನು ಬೆಳೆಸಿದೆ, ನಾನು ಪಕ್ಷವನ್ನು ಬೆಳೆಸಿದ್ದೇನೆ. ಆದರೂ ನನ್ನನ್ನು ಸುಲಭವಾಗಿ ನಿರ್ಲಕ್ಷ್ಯ ಮಾಡಲಾಗುವುದಿಲ್ಲ ಎಂದು ಭಾವನಾತ್ಮಕವಾಗಿ ಹೇಳಿದರು.

ಒಟ್ಟಾರೆಯಾಗಿ ಈ ಹೇಳಿಕೆಗಳ ಮೂಲಕ ರಘುಪತಿ ಭಟ್ ಅವರು ಪಕ್ಷದ ಪ್ರಸ್ತುತ ನಾಯಕತ್ವದ ವಿರುದ್ಧ ತೀವ್ರ ಅಸಮಾಧಾನ ತೋರುತ್ತಿದ್ದರೂ, ತಮ್ಮ ನಿಷ್ಠೆ ಮತ್ತು ಆತ್ಮೀಯತೆ ಇನ್ನೂ ಬಿಜೆಪಿಯತ್ತವೇ ಇದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.



