ಉಡುಪಿ : ತಮ್ಮ ವಿಶಿಷ್ಟ ಮಾತುಗಳು ಮತ್ತು ಸರಳ ವ್ಯಕ್ತಿತ್ವದಿಂದ ಜನಮನ ಗೆದ್ದಿರುವ ಈ ಬಾರಿಯ ಬಿಗ್ ಬಾಸ್ ರನ್ನರ್ಅಪ್ ರಕ್ಷಿತಾ ಶೆಟ್ಟಿಗೆ ಅವರ ಹುಟ್ಟೂರಿನಲ್ಲಿ ಭರ್ಜರಿ ಸ್ವಾಗತ ಲಭಿಸಿದೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ ಇದೇ ಮೊದಲ ಬಾರಿಗೆ ತಮ್ಮ ಊರಿಗೆ ಆಗಮಿಸಿದ ರಕ್ಷಿತಾ ಅವರನ್ನು ಅಭಿಮಾನಿಗಳು ಊರಿನವರು ಸ್ವಾಗತಿಸಿದರು.

ಹುಟ್ಟೂರು ಉಚ್ಚಿಲಕ್ಕೆ ಆಗಮಿಸುವ ಮುನ್ನ ಹೆಜಮಾಡಿ ಕಾಲ್ ಗೇಟ್ ಬಳಿ ಸ್ಥಳೀಯರು ಹಾಗೂ ಊರವರು ಸೇರಿ ರಕ್ಷಿತಾಗೆ ಅದ್ಧೂರಿಯಾಗಿ ಸ್ವಾಗತ ಕೋರಿದರು. ರಕ್ಷಿತಾ ಆಗಮಿಸುತ್ತಿದ್ದಂತೆ ‘ಬಿಗ್ ಬಾಸ್ ರಕ್ಷಿತಾಗೆ ಜೈ’ ಎಂದು ಘೋಷಣೆ ಕೂಗಲಾಯಿತು. ತೆರೆದ ವಾಹನದಲ್ಲಿ ನಿಂತು ರಕ್ಷಿತಾ ಜನರತ್ತ ಕೈಬೀಸಿ ಅಭಿವಾದನೆ ಸಲ್ಲಿಸಿದರು.

ರಕ್ಷಿತಾ ಆಗಮಿಸುವುದಕ್ಕೂ ಮುನ್ನವೇ ಊರವರು ರಸ್ತೆ ಬದಿಯಲ್ಲಿ ಕಾಯುತ್ತಿದ್ದ ದೃಶ್ಯ ಕಂಡುಬಂತು. ಅವರನ್ನು ಒಂದು ನೋಟ ನೋಡಲು ಹಾಗೂ ಸೆಲ್ಫಿ ಪಡೆಯಲು ಅಭಿಮಾನಿಗಳು ಮುಗಿಬಿದ್ದ ದೃಶ್ಯ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ರಕ್ಷಿತಾ ತಮ್ಮ ಇಷ್ಟದ ಮೀನು ಬಂಗುಡೆಯನ್ನು ಹಿಡಿದು ಕುಣಿದಾಡಿ, ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡರು.



