ಉಡುಪಿ : ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಕ್ರಾಸ್ನಲ್ಲಿ ಪೊಲೀಸ್ ಇಲಾಖೆಯ ಬಳಕೆಗೆ ಸುಸಜ್ಜಿತ ತನಿಖಾ ಠಾಣೆ (ಚೆಕ್ಪೋಸ್ಟ್) ನಿರ್ಮಾಣಗೊಂಡಿದ್ದು, ಇದೀಗ ಅಧಿಕೃತವಾಗಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.

ಸುಸಜ್ಜಿತ ಚೆಕ್ಪೋಸ್ಟ್ ಅನ್ನು ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾದ ಡಾ. ಹರ್ಷ ಪ್ರಿಯಂವದಾ ಐಪಿಎಸ್ ಅವರು ಉದ್ಘಾಟಿಸಿ, ಅದನ್ನು ಅಧಿಕೃತವಾಗಿ ಪೊಲೀಸ್ ಇಲಾಖೆಗೆ ದೈನಂದಿನ ಕರ್ತವ್ಯನಿರ್ವಹಣೆಗೆ ಹಸ್ತಾಂತರಿಸಿದರು.

ಕಾರ್ಕಳದ ರಶ್ವಿ ಕನ್ಸ್ಟ್ರಕ್ಷನ್ ಮಾಲಕ ವಿನಿಶ್ ಅವರು ತಮ್ಮ ಮಾವರಾದ ದಿ ಡಿ.ಆರ್. ರಾಜು ಅವರ ಸ್ಮರಣಾರ್ಥವಾಗಿ ಈ ಚೆಕ್ಪೋಸ್ಟ್ನ್ನು ನಿರ್ಮಿಸಿ ಕೊಟ್ಟಿದ್ದಾರೆ. ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಮಾದರಿಯ ತನಿಖಾ ಠಾಣೆಯಾಗಿರುವ ಇದು ಬಾರಾಡಿ ಕ್ರಾಸ್ನಲ್ಲಿ ಪೊಲೀಸ್ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ದೊಡ್ಡ ನೆರವಾಗಲಿದೆ.

ನಿರ್ಮಾಣ ಕಾರ್ಯಕ್ಕೆ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್, ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಹಾಗೂ ಸ್ಥಳೀಯ ಸಾರ್ವಜನಿಕರು ಸಹಕಾರ ನೀಡಿದ್ದಾರೆ. ಈ ಹೊಸ ಚೆಕ್ಪೋಸ್ಟ್ ಮೂಲಕ ಪ್ರದೇಶದಲ್ಲಿ ಕಾನೂನು-ಸುವ್ಯವಸ್ಥೆ ಕಾಪಾಡುವ ಕಾರ್ಯ ಮತ್ತಷ್ಟು ಬಲಗೊಳ್ಳಲಿದೆ.



