ಉಡುಪಿ: ಬನ್ನಂಜೆಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ತೀಕ ಮಾಸದ ಸೋಮವಾರದ ಅಂಗವಾಗಿ ಲೋಕ ಕಲ್ಯಾಣಾರ್ಥವಾಗಿ ರುದ್ರಯಾಗ ನೆರವೇರಿಸಲಾಯಿತು. ದೇವಳದ ತಂತ್ರಿಗಳಾದ ಶಶಿಕಾಂತ್ ತಂತ್ರಿಗಳ ಮಾರ್ಗದರ್ಶನದಲ್ಲಿ ಅರ್ಚಕ ವೃಂದದವರು ಧಾರ್ಮಿಕ ಪೂಜಾ ವಿಧಿಗಳನ್ನು ನಡೆಸಿಕೊಟ್ಟರು.

ದೇವರ ಸನ್ನಿಧಿಯಲ್ಲಿ ಅರ್ಚಕರಾದ ವಾಸುದೇವ ಉಪಾಧ್ಯಾಯ ಸಾಮೂಹಿಕ ಪ್ರಾರ್ಥನೆ ನಡೆಸಿದರು. ಬಳಿಕ ಶ್ರೀ ದೇವರಿಗೆ ಪಂಚಾಮೃತಾಭಿಷೇಕ, ಸೇವಾದಾರರಿಗೆ ಸಂಕಲ್ಪ ವಿಧಿ, ಅಗ್ನಿ ಪ್ರತಿಷ್ಠೆ, ಶತ ರುದ್ರಾಭಿಷೇಕ, ನವಕ ಪ್ರಧಾನ, ಭಜನೆ ಕಾರ್ಯಕ್ರಮಗಳು ಹಾಗೂ ಶ್ರೀ ದೇವರಿಗೆ ವಿಶೇಷ ಅಲಂಕಾರ ನೆರವೇರಿಸಲಾಯಿತು. ಯಾಗದ ಪುರ್ಣಾಹುತಿ ಬಳಿಕ ಮಹಾಪೂಜೆ ಮತ್ತು ಪಲ್ಲಪೂಜೆ ನಡೆಯಿತು. ಕಾರ್ಯಕ್ರಮದ ಅಂತ್ಯದಲ್ಲಿ ನಡೆದ ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ ಮೂರು ಸಾವಿರಕ್ಕಿಂತ ಹೆಚ್ಚು ಭಕ್ತರು ಭೋಜನ ಪ್ರಸಾದ ಸ್ವೀಕರಿಸಿದರು.

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮಾಧವ ಬನ್ನಂಜೆ, ನಗರಸಭಾ ಸದಸ್ಯರು ಟಿ.ಜಿ. ಹೆಗ್ಡೆ, ಸವಿತಾ ಹರೀಶ್ ರಾಮ್, ಸಮಿತಿಯ ಸದಸ್ಯರಾದ ಪ್ರಭಾಕರ್ ಶೆಟ್ಟಿ, ದಿನೇಶ್ ಪುತ್ರನ್, ಶೇಖರ್ ಶೆಟ್ಟಿ, ಸುದೇಶ್ ಶೇಟ್, ರಾಜೇಶ್ ಬನ್ನಂಜೆ, ಶಮಿತಾ ಎಸ್. ಭಂಡಾರಿ, ವಿದ್ಯಾಲತಾ ಶೆಟ್ಟಿ, ರವಿರಾಜ್ ಭಟ್, ಅರುಣ್ ಕುಮಾರ್ ಹಾಗೂ ಭಜನಾ ಮಂಡಳಿಯ ಸದಸ್ಯರು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು.



