ಉಡುಪಿ: ಸಹಕಾರ ಭಾರತಿ ರಾಜ್ಯ ಕಾರ್ಯಕಾರಣಿ ಮತ್ತು ಪ್ರಾಂತ ಅಭ್ಯಾಸ ವರ್ಗವು ಫೆ. 8 ಮತ್ತು 9ರಂದು ಮಣಿಪಾಲದ ಆರ್. ಎಸ್. ಬಿ. ಸಭಾಭವನದಲ್ಲಿ ಜರುಗಲಿದೆ ಎಂದು ಸಹಕಾರಿ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿ ನರಸಿಂಹ ಕಾಮತ್ ಸಾಣೂರು ಮಾಹಿತಿ ನೀಡಿದರು. ಅವರು ಈ ಬಗ್ಗೆ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಫೆಬ್ರವರಿ 8ರ ಬೆಳಿಗ್ಗೆ 11 ಗಂಟೆಗೆ ಸಹಕಾರ ಭಾರತಿ ಕರ್ನಾಟಕದ ರಾಜ್ಯಾಧ್ಯಕ್ಷ ದಾವಣಗೆರೆಯ ಪ್ರಭುದೇವ ಆರ್. ಮಾಗನೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಣಿ – ಅಭ್ಯಾಸವರ್ಗ ಉದ್ಘಾಟನೆಗೊಳ್ಳಲಿದೆ. ಈ ಸಮಾರಂಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಹಾರದ ದೀಪಕ್ ಚೌರಾಷಿಯಾ ಭಾಗವಹಿಸಲಿದ್ದಾರೆ ಎಂದರು.
ರಾಜ್ಯದ ಸಹಕಾರಿ ಭಾರತಿಯ ನಾಲ್ಕು ವಿಭಾಗಗಳಿಂದ 32 ಸಂಘಟನಾ ಜಿಲ್ಲೆಗಳ ಜಿಲ್ಲಾಧ್ಯಕ್ಷರುಗಳು, ಪ್ರಧಾನ ಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ, ಮಹಿಳಾ ಪ್ರಮುಖ್ ಹಾಗೂ ಸಹ ಪ್ರಮುಖ್ ಜೊತೆಗೆ ರಾಜ್ಯ ಸಮಿತಿಯ ವಿವಿಧ ಜವಾಬ್ದಾರಿಗಳನ್ನು ಹೊಂದಿರುವ ಪ್ರಮುಖರು, ರಾಜ್ಯ ಮತ್ತು ಕರ್ನಾಟಕ ರಾಜ್ಯದಿಂದ ಆಯ್ಕೆಗೊಂಡಿರುವ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರು ಸೇರಿ ಸುಮಾರು 250ಕ್ಕೂ ಮಂದಿ ಪಾಲ್ಗೊಳ್ಳಲಿದ್ದಾರೆ.
ಅಂದು ಮಧ್ಯಾಹ್ನ 3ರಿಂದ ಪ್ರಾಂತ ಅಭ್ಯಾಸ ವರ್ಗವನ್ನು ಸಹಕಾರ ಭಾರತಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದೀಪಕ್ ಚೌರಶಿಯರವರು ಉದ್ಘಾಟಿಸುತ್ತಾರೆ. ಈ ಸಂದರ್ಭದಲ್ಲಿ ಸಹಕಾರಿ ಭಾರತಿ ರಾಜ್ಯ ಮಹಿಳಾ ಪ್ರಮುಖ್ ವಿದ್ಯಾ ಪೈ, ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೊಪ್ಪಳದ ರಮೇಶ್ ವೈದ್ಯ, ರಾಷ್ಟ್ರೀಯ ಉಪಾಧ್ಯಕ್ಷ ಬೆಂಗಳೂರಿನ ಕೃಷ್ಣಾ ರೆಡ್ಡಿ, ಉಡುಪಿ ಜಿಲ್ಲಾ ಅಧ್ಯಕ್ಷ ದಿನೇಶ್ ಹೆಗ್ಡೆ, ಆತ್ರಾಡಿ ಅವರು ಉಪಸ್ಥಿತರಿರುವರು.
ಆ ಬಳಿಕ ವಿವಿಧ ವಿಚಾರಗೋಷ್ಠಿ, ಸಂಘಟನಾತ್ಮಕ ವಿಚಾರಗಳ ಬಗ್ಗೆ, ಸಂವಾದ ಕಾರ್ಯಕ್ರಮ ನಡೆಯಲಿರುವುದು. ಮಾಜಿ ರಾಜ್ಯಾಧ್ಯಕ್ಷ ಎಸ್ ಆರ್ ಸತೀಶ್ ಚಂದ್ರ, ರಾಜ್ಯ ಪ್ರಮುಖರಾದ ಮಂಜುನಾಥ ಕರ್ಕಿ, ಪ್ರಸನ್ನ ಕುಮಾರ್, ರಾಜ್ಯ ಸಂಘಟನಾ ಪ್ರಮುಖ ಮಂಜುನಾಥ ಅವರು ಮಾರ್ಗದರ್ಶನ ನೀಡಲಿರುವರು. ಫೆ.9 ರಂದು ಅಪರಾಹ್ನ 12 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಮಾಜಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಕೊಂಕೋಡಿ ಪದ್ಮನಾಭರವರು ಸಮಾರೋಪ ಭಾಷಣವನ್ನು ಮಾಡಲಿರುವರು
ಸುದ್ದಿಗೋಷ್ಠಿಯಲ್ಲಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕ ಬೋಳ ಸದಾಶಿವ ಶೆಟ್ಟಿ, ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯ ಮಂಜುನಾಥ ಎಸ್. ಕೆ., ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ, ಪ್ರಧಾನ ಕಾರ್ಯದರ್ಶಿ ಸುಧೀಶ್ ನಾಯಕ್, ಸಂಘಟನಾ ಕಾರ್ಯದರ್ಶಿ ಸುಜಿತ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್, ಕಾರ್ಯದರ್ಶಿ ವಿಜೇತ್ ಕುಮಾರ್ ಉಪಸ್ಥಿತರಿದ್ದರು.