ಉಡುಪಿ: ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆಯ ಹೆಚ್ಚಳದಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಪರಿಣಾಮಗಳನ್ನು ಮನಗಂಡು, ಸಾಲಿಗ್ರಾಮ ಮೂಲದ ಸಮಾಜಸೇವಕರೋರ್ವರು ಪ್ಲಾಸ್ಟಿಕ್ ಮುಕ್ತ ವಿವಾಹ ಮಹೋತ್ಸವ ಆಚರಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಮದುವೆಗೆ ಬಂದ ಪ್ರತಿಯೋರ್ವ ಅತಿಥಿಗೂ ಪ್ಲಾಸ್ಟೀಕ್ ಸಮಸ್ಯೆಯ ಕುರಿತು ಮಾಹಿತಿ ನೀಡುವ ಮೂಲಕದ ಸಮಾಜ ಸೇವಕ ಮಾಧವ ಪೂಜಾರಿ ಹೊಸ ಬದಲಾವಣೆಗೆ ನಾಂದಿ ಹಾಡಿದ್ದಾರೆ.

ಬ್ರಹ್ಮಾವರದ ಧರ್ಮಾವರಂ ಅಡಿಟೋರಿಯಂ ನಲ್ಲಿ ನಡೆದ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿಯ ಮಾಧವ ಪೂಜಾರಿ ಅವರ ಮಗಳಾದ ಸೋಶಿಯಲ್ ಮೀಡಿಯಾ ಇನ್ಲೂಯೇನ್ಸರ್ ಸುಶ್ಮೀತಾ ಸಾಲಿಗ್ರಾಮ ಮತ್ತು ರಸಿ ಕಿರಣ್ ಅವರ ಮದುವೆ ಸದ್ಯ ಜಿಲ್ಲೆಯ ಹಾಟ್ ಟಾಪಿಕ್. ಮದುವೆ ಎಂದಾಕ್ಷಣ ಅತಿಥಿಗಳನ್ನು ಬರಮಾಡಿಕೊಳ್ಳುದರಿಂದ ಹಿಡಿದು ಊಟ ಮುಗಿಸುವ ತನಕ ಬಹುತೇಕ ಸರ್ವಂ ಪ್ಲಾಸ್ಟಿಕ್ ಮಯವಾಗಿದೆ, ಒಂದು ಮದುವೆ ಸಮಾರಂಭದ ಮೂಲಕ ಕೆಜಿಗಟ್ಟಲೇ ಪ್ಲಾಸ್ಟೀಕ್ ಹೊರ ಬೀಳುತ್ತಿದೆ ಎನ್ನುವ ಕಳವಳ ಪರಿಸರ ತಜ್ಞರದ್ದು, ಕುಡಿಯುವ ನೀರಿನ ಸಾವಿರಾರು ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸಿಕ್ ಐಸ್ ಕ್ರೀಂ ಕಪ್ ಗಳು, ಊಟದ ಟೇಬಲ್ ಗೆ ಹಾಸುವ ಪಾಸ್ಟಿಕ್ ಕವರ ಹೀಗೆ ಬಹುತೇಕ ಪ್ಲಾಸ್ಟೀಕ್ ಇಲ್ಲದೇ ಮದುವೆ ಇಲ್ಲ ಎನ್ನುವ ಪರಿಸ್ಥಿತಿ ಇದೆ. ಹೀಗಾಗಿ ಈ ಮದುವೆ ಕಾರ್ಯಕ್ರಮ ಮೂಲಕ ಪ್ಲಾಸ್ಟೀಕ್ ಜಾಗೃತೆ ಮೂಡಿಸುವ ಸಲುವಾಗಿ ಕೋಟ ಸಾಲಿಗ್ರಾಮ ರೋಟರಿ ಸಂಸ್ಥೆಯ ಸಕ್ರೀಯ ಸದಸ್ಯರು ಆಗಿರುವ ಮಾಧವ ಪೂಜಾರಿ ಅವರು ತಮ್ಮ ಮಗಳ ಮದುವೆಯನ್ನು ಕ್ಯಾಪ್ಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಪ್ಲಾಸ್ಟೀಕ್ ಮುಕ್ತ ಮದುವೆ ಆಯೋಜಿಸಿದ್ದಾರೆ.

ಈ ವಿಶೇಷ ಮದುವೆಯಲ್ಲಿ ನೀರಿನ ಬಾಟಲಿ, ಪ್ಲೇಟು, ಚಮಚ, ಸ್ಟ್ರಾ, ಗ್ಲಾಸ್ ಸೇರಿದಂತೆ ಯಾವುದೇ ರೀತಿಯ ಏಕಬಳಕೆ ಪ್ಲಾಸ್ಟಿಕ್ ಬಳಕೆಯಾಗಿಲ್ಲ. ಬಂದ ಪ್ರತಿಯೋರ್ವ ಅತಿಥಿಗೂ ಕೂಡ ಸ್ಟೀಲ್ ಬಾಟಲಿಯ ಮೂಲಕ ಕುಡಿಯುವ ನೀರು ವಿತರಿಸಲಾಯಿತು. ಊಟದ ಟೇಬಲ್ ಗೆ ಕಬ್ಬಿನ ಸಿಪ್ಪೆಯಿಂದ ಮಾಡಿದ ಪೇಪರ್ ರೋಲ್, ಐಸ್ ಕ್ರೀಂ ಗೆ ಕಬ್ಬಿನ ಸಿಪ್ಪೆಯಿಂದ ಮಾಡಲಾದ ಕಪ್ ಮೂಲಕವೇ ವಿತರಣೆ ಮಾಡಲಾಯಿತು.

ಇನ್ನು ನೈಸರ್ಗಿಕವಾಗಿ ಸಿಗುವ ಹಣ್ಣಿನ ಐಸ್ ಕ್ರೀಂ ಕೂಡ ಮದುವೆ ಹೈ ಲೈಟ್ ಆಗಿತ್ತು. ಮದುವೆಯ ಸವಿನೆನಪಿನ ಸಿಹಿ ಯನ್ನು ಯಾವುದೇ ಪ್ಲಾಸ್ಟೀಕ್ ಡಬ್ಬದಲ್ಲಿ ಹಾಕಿ ನೀಡದೆ, ನೇರವಾಗಿ ಎಲೆಗೆ ಹಾಕುವ ಮೂಲಕ ಪ್ಲಾಸ್ಟೀಕ್ ಬಳಕೆ ತಪ್ಪಿಸಲಾಯಿತು. ವಿಶೇಷವಾಗಿ ಮದುವೆಯ ವಿಶೇಷ ಊಟವನ್ನು ಸ್ಥಳೀಯ ಹೊಸ ಬದುಕು ಆಶ್ರಮದ ವಾಸಿಗಳಿಗೆ ಊಣಬಡಿಸಿದ್ದಲ್ಲದೇ, ಓರ್ವ ಆಶ್ರಮವಾಸಿಯ ಒಂದು ವರ್ಷದ ಖರ್ಚನ್ನು ಮಗಳ ಮದುವೆ ಸಂತೋಷದ ಸವಿನೆನಪಿಗಾಗಿ ತಂದೆ ಮಾಧವ ಪೂಜಾರಿ ಭರಿಸುವುದಾಗಿ ತಿಳಿಸುವ ಮೂಲಕ ಸಮಾಜಕ್ಕೆ ಮಾದರಿ ಕಾರ್ಯ ಮಾಡಿದ್ದಾರೆ.

ಒಟ್ಟಾರೆಯಾಗಿ ಮದುವೆ ಕಾರ್ಯಕ್ರಮದ ಮೂಲಕ ಸಾಮಾಜಿಕ ಸಂದೇಶ ನೀಡಲು ಹೊರಟ ಮಾಧವ ಪೂಜಾರಿ ಅವರು ಅವರ ಕುಟುಂಬಕ್ಕೆ ನಾವು ಹ್ಯಾಟ್ಸಾಪ್ ಹೇಳಲೆ ಬೇಕು. ಮೃಷ್ಟಾನ್ನ ಭೋಜನದ ಜೊತೆ ಸಾಮಾಜಿಕ ಸಂದೇಶ ಪಡೆದ ಅತಿಥಿಗಳು ಇಂತಹ ಮದುವೆಗಳು ವಿಶ್ವವ್ಯಾಪ್ತಿಯಾಗಲಿ ಎಂದು ಹರಿಸಿದ್ದಂತು ಸತ್ಯ.



