ಉಡುಪಿ : ಪ್ರೀತಿಯ ಮೋಸದ ಬಲೆಗೆ ಬಿದ್ದು ಗರ್ಭಿಣಿಯಾದ ಯುವತಿಯೊಬ್ಬಳ ಬದುಕು ದುರಂತವಾಗುವುದನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ತಪ್ಪಿಸಿದ ಘಟನೆ ನಡೆದಿದೆ. ಹೊರರಾಜ್ಯದ ಮಹಾನಗರವೊಂದರಲ್ಲಿ ಉದ್ಯೋಗದಲ್ಲಿದ್ದ ಯುವತಿಗೆ ಪ್ರಿಯಕರನಿಂದ ಮೋಸವಾಗಿದೆ. ಮದುವೆಯ ಭರವಸೆ ನೀಡಿ ದೈಹಿಕ ಸಂಬಂಧ ಬೆಳೆಸಿದ ಯುವಕ ನಂತರ ಕೈಕೊಟ್ಟಿದ್ದಾನೆ. ಗರ್ಭಿಣಿಯಾಗಿರುವ ವಿಷಯ ಹೊರಬಂದರೆ ತಾನು ಹಾಗೂ ಕುಟುಂಬವು ಅವಮಾನಕ್ಕೆ ಒಳಗಾಗಬಹುದು ಎಂಬ ಭಯದಿಂದ ಯುವತಿ ತೀವ್ರ ಆತಂಕಕ್ಕೊಳಗಾಗಿದ್ದಳು.

ಈ ವೇಳೆ ಯುವತಿಯ ಸಂಪರ್ಕಕ್ಕೆ ಬಂದ ವಿಶು ಶೆಟ್ಟಿ ಅವರು ಆಕೆಗೆ ಸಾಂತ್ವನ ಕೇಂದ್ರದ ಮೂಲಕ ಆಶ್ರಯ ಒದಗಿಸಿ, ವೈದ್ಯಕೀಯ ನೆರವಿನ ವ್ಯವಸ್ಥೆ ಮಾಡಿದ್ದಾರೆ. ಸುಮಾರು ಒಂದು ತಿಂಗಳ ಕಾಲ ಆಶ್ರಯ ನೀಡಿದ ನಂತರ ಆಕೆಯ ಹೆರಿಗೆ ಸುರಕ್ಷಿತವಾಗಿ ನಡೆದಿದ್ದು, ಹೆತ್ತ ಮಗುವನ್ನು ನೋಂದಾಯಿತ ದತ್ತು ಕೇಂದ್ರಕ್ಕೆ ಕಾನೂನು ಪ್ರಕಾರ ಒಪ್ಪಿಸಲಾಗಿದೆ. ಮಗುವನ್ನು ಒಪ್ಪಿಸುವ ಸಂದರ್ಭದಲ್ಲಿ ಯುವತಿಯ ಭಾವನಾತ್ಮಕ ಸ್ಥಿತಿ ನೋವುಂಟುಮಾಡುವಂತಿತ್ತು. ತಪ್ಪು ಯಾರದ್ದೇ ಆಗಿರಲಿ, ನೋವು ಅನುಭವಿಸುವುದು ಹೆಣ್ಣೇ. ಮದುವೆಯ ಮುಂಚೆ ಯಾವುದೇ ಕಾರಣಕ್ಕೂ ದೈಹಿಕ ಸಂಬಂಧ ಬೆಳೆಸಬಾರದು ಎಂದು ವಿಶು ಶೆಟ್ಟಿ ತಿಳಿಸಿದ್ದಾರೆ.

ಹೆಣ್ಣುಮಕ್ಕಳು ಜಾಗರೂಕರಾಗಿರಬೇಕೆಂದು ಹಾಗೂ ದೂರದ ಊರಲ್ಲಿ ಉದ್ಯೋಗದಲ್ಲಿರುವ ಪುತ್ರಿಯರ ಬದುಕಿನ ಮೇಲೂ ಪೋಷಕರು ಗಮನಹರಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಸಾಂತ್ವನ ಕೇಂದ್ರ ಸಹಕಾರದಿಂದ ಯುವತಿಯ ಮಾನ ಕಾಪಾಡುವ ಉದ್ದೇಶದಿಂದ ಎಲ್ಲಾ ಕ್ರಮಗಳು ಗೌಪ್ಯವಾಗಿ ಕೈಗೊಳ್ಳಲಾಗಿದೆ.



