Tuesday, June 17, 2025

spot_img

ಪ್ರವಾಸಿಗರು ಹೋಗಲಿ, ಹೋಗದಿರಲಿ ಗಡಿ ಭದ್ರತೆ ಜವಾಬ್ದಾರಿ ಸರಕಾರದ್ದು : ಕೆ ಜಯಪ್ರಕಾಶ್‌ ಹೆಗ್ಡೆ

ಉಡುಪಿ: ಜಾತಿ ಜನಗಣತಿಯಿಂದ ಮೀಸಲಾತಿ ಕೊಡುವುದು ಕಷ್ಟ. ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ತಿಳಿದರೆ ಮೀಸಲಾತಿ ಕೊಡುವುದು ಸುಲಭ. ಯಾರನ್ನು ಯಾವ ಪ್ರವರ್ಗಕ್ಕೆ ಹಾಕಬಹುದು ಎಂದು ನಿರ್ಧರಿಸಬಹುದು. ಕೇಂದ್ರ ಸರ್ಕಾರ ತೆಗೆದುಕೊಂಡ ತೀರ್ಮಾನ ಖುಷಿಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ, ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಅವರು ಗುರುವಾರ, ಉಡುಪಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಹೈಕಮಾಂಡ್ ಒಪ್ಪಿದಾಗ ರಾಜ್ಯ ಬಿಜೆಪಿ ಒಪ್ಪಲೇಬೇಕು. ಕೇಂದ್ರ ಸರ್ಕಾರ ಕ್ಯಾಬಿನೆಟ್‌ನಲ್ಲಿ ತೀರ್ಮಾನ ತೆಗೆದುಕೊಂಡಾಗಿದೆ. ಬಹಳ ಸಮಯದಿಂದ ರಾಹುಲ್ ಗಾಂಧಿ ಇದನ್ನೇ ಒತ್ತಾಯ ಮಾಡುತ್ತಿದ್ದರು ಎಂದರು. 

ಕೇಂದ್ರದ ಜನಗಣತಿ ವರದಿ ಬಂದ ಬಳಿಕ ಸಮರ್ಪಕವಾದ ವರದಿ ಹೊರಬೀಳಲಿದೆ ಎಂಬ ಬಿಜೆಪಿಗರ ಅಭಿಪ್ರಾಯದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕರ್ನಾಟಕದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ ಮಾಡಿದ್ದೇವೆ. ಯಾವುದು ವೈಜ್ಞಾನಿಕ ಅಲ್ಲ ಎಂಬುದಕ್ಕೆ ಕಾರಣ, ದಾಖಲೆ ಕೊಡಬೇಕಾಗುತ್ತದೆ. ಜಯಪ್ರಕಾಶ್ ಹೆಗ್ಡೆ ಅವರ ಸಮೀಕ್ಷಾ ವರದಿಯನ್ನು ಸದನದ ಮುಂದೆ ಮಂಡಿಸುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳುತ್ತಿದ್ದರು. ಆದರೆ ಬಿಜೆಪಿಯವರು ನಮ್ಮ ಸಮೀಕ್ಷಾ ವರದಿಯನ್ನು ತೆಗೆದುಕೊಳ್ಳಲೇ ಇಲ್ಲ. ವರದಿಯನ್ನು ತೆಗೆದುಕೊಂಡಿದ್ದರೆ ನಾವು ಅವತ್ತೇ ಸರಕಾರಕ್ಕೆ ಹಸ್ತಾಂತರ ಮಾಡುತ್ತಿದ್ದೆವು ಎಂದರು. ಕಾಂತರಾಜು ಸಂಗ್ರಹ ಮಾಡಿದ ದತ್ತಾಂಶದ ಮೇಲೆ ನಾವು ವರದಿಯನ್ನು ಸರ್ಕಾರಕ್ಕೆ ಒಪ್ಪಿಸಿದ್ದೇವೆ. ಕ್ಯಾಬಿನೆಟ್ ಮುಂದೆ ಈ ವರದಿಯನ್ನು ತೆಗೆದುಕೊಂಡು ಹೋಗಿದ್ದಾರೆ ಚರ್ಚೆ ಮಾಡಿ ತೀರ್ಮಾನಿಸುತ್ತಾರೆ. ರಾಜ್ಯದ ಜಾತಿ ಗಣತಿ ವರದಿ ಬಗ್ಗೆ ಕ್ಯಾಬಿನೆಟ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆ ಕಾದು ನೋಡೋಣ ಎಂದರು.  

2011ರಲ್ಲಿ ದೇಶದಲ್ಲಿ ಜನಗಣತಿಯಾಗಿತ್ತು ಈಗ 2025 ರಲ್ಲಿ ಆಗುತ್ತಿದೆ. ಈ ಅವಧಿಯಲ್ಲಿ ಅದೆಷ್ಟೋ ಚುನಾವಣೆಗಳು ನಡೆದು ಹೋಗಿದೆ. ವರದಿ ಬೇಗ ಬಿಡುಗಡೆ ಆಗಲಿ ಎಂಬುದು ನಮ್ಮ ಅಭಿಪ್ರಾಯವಾಗಿದ್ದು, ನಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೇವೆ. ತೀರ್ಮಾನ ತೆಗೆದುಕೊಳ್ಳುವುದು ಸರ್ಕಾರ, ವರದಿ ಮಂಡನೆ ಆಗಲಿ ಎಂಬುದು ನಮ್ಮ ಅಭಿಪ್ರಾಯ. ಅದಕ್ಕಾಗಿ ಕಾಯುತ್ತಿದ್ದೇವೆ. ಕ್ಯಾಬಿನೆಟ್ ಒಪ್ಪಿಗೆ ಕೊಟ್ಟು ವರದಿಯನ್ನು ಸ್ವೀಕಾರ ಮಾಡಿದರೆ ಸರಕಾರಕ್ಕೆ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಾಧ್ಯ ಆಗುತ್ತದೆ. ಎಲ್ಲಾ ರಾಜ್ಯಗಳು ಕರ್ನಾಟಕ ಮಾದರಿಯ ಗಣತಿಯನ್ನು ಮಾಡಬೇಕು ಎಂಬುದು ನನ್ನ ಆಕಾಂಕ್ಷೆಯಾಗಿದೆ ಎಂದರು.  ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಬಹಿರಂಗ ಆಗಬೇಕು. ಸಣ್ಣಪುಟ್ಟ ಜಾತಿಯವರಿಗೂ ಸೌಲಭ್ಯಗಳು ಸಿಗಬೇಕು. ಸಮಸಮಾಜವನ್ನು ನಿರ್ಮಾಣ ಮಾಡಲು ವರದಿ ಜಾರಿ ಅಗತ್ಯವಾಗಿದ್ದು, ಕೇಂದ್ರ ಸರ್ಕಾರ ಜಾತಿಗಣತಿಯಲ್ಲಿ ಯಾವ ವಿಭಾಗವನ್ನೆಲ್ಲ ಸರ್ವೆ ಮಾಡುತ್ತದೆ ಎಂದು ನೋಡಬೇಕು. ನಮ್ಮ ಅವರ ಗಣತಿಯಲ್ಲಿ ವ್ಯತ್ಯಾಸಗಳಿದ್ದರೆ ಅಪ್ಡೇಟ್ ಮಾಡಲು ಅವಕಾಶ ಇದೆ. ನಮ್ಮ ವರದಿಯನ್ನು ಸ್ವೀಕಾರ ಮಾಡಿದರೆ ಯಾವ ಜಾತಿಯು ತಪ್ಪಿ ಹೋಗುವುದಿಲ್ಲ ಎಂದರು. 

ಪೆಹೆಲ್ಗಾಮ್ ಹಿಂದೂ ನರಮೇಧ ವಿಚಾರ

ಪೆಹಲ್ಗಾಮ್ ಘಟನೆಯ ಬಗ್ಗೆ ವಿರೋಧ ಪಕ್ಷಗಳು ಕೇಂದ್ರ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದು, ಇಡೀ ದೇಶ ಒಂದಾಗಿದೆ. ಪೆಹಲ್ಗಾಮ್ ನಲ್ಲಿ ಆದ ನೋವು ಆ ಕುಟುಂಬಗಳಿಗೆ ಮಾತ್ರ ಅಲ್ಲ, ಇಡೀ ದೇಶಕ್ಕೆ ನೋವಾಗಿದೆ ಎಂದರು. ಕುಟುಂಬಸ್ಥರ ಹೇಳಿಕೆಗಳನ್ನು ಟೀಕೆ ಮಾಡುವುದು ಸರಿಯಲ್ಲ, ಘಟನೆ ಬಗ್ಗೆ ಹೀಗೆ ಆಗಿದೆ ಎಂಬ ಸ್ಕ್ರಿಪ್ಟ್ ಕೊಡುವ ಪರಿಸ್ಥಿತಿ ಬರಬಾರದು. ಪ್ರತ್ಯಕ್ಷ ಘಟನೆಯನ್ನು ಕುಟುಂಬಗಳು ವಿವರಿಸಿವೆ ಅದನ್ನು ಯಾರು ಟೀಕೆ ಮಾಡಬಾರದು. ಅಲ್ಲಿಯ ಭದ್ರತೆಯ ಬಗ್ಗೆ ಕೇಂದ್ರ ಸರ್ಕಾರ ಗಮನವನ್ನು ಹರಿಸಬೇಕು. ಪ್ರವಾಸಿಗರು ಇಲ್ಲದಿದ್ದರೆ ಆ ಭಾಗದಲ್ಲಿ ಭದ್ರತೆ ಬೇಡವೇ..? ಎಂದು ಪ್ರಶ್ನಿಸಿದರು. 

ಪ್ರವಾಸಿಗರು ಹೋಗಲಿ, ಹೋಗದಿರಲಿ ಪಾಕಿಸ್ತಾನದ ಗಡಿಯಲ್ಲಿ ಭದ್ರತೆ ಕೊಡಬೇಕಾದ್ದು ಸರ್ಕಾರದ ಜವಾಬ್ದಾರಿ. ಪಾಕಿಸ್ತಾನದವರನ್ನು ಗುರುತಿಸಿ ವಾಪಸ್ ಕಳುಹಿಸುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದ್ದು, ಎಲ್ಲಾ ರಾಜ್ಯದಿಂದಲೂ ಗುರುತಿಸಿ ವಾಪಸ್ ಕಳುಹಿಸಬೇಕಾಗುತ್ತದೆ ಎಂದರು. ಅಗತ್ಯವಿದ್ದಲ್ಲಿ ಯುದ್ಧ ಆಗಬೇಕಾಗುತ್ತದೆ. ಯುದ್ಧವಿಲ್ಲದೆ ಬೇರೆ ರೀತಿಯಲ್ಲಿ ಟ್ಯಾಕಲ್ ಮಾಡಲು ಸಾಧ್ಯವಾಗುವುದಾದರೆ ಮಾಡಬೇಕು. ಯುದ್ಧ ಬೇಕಾ ಬೇಡ್ವಾ ಅಂತ ತೀರ್ಮಾನ ತೆಗೆದುಕೊಳ್ಳುವುದು ಕೇಂದ್ರ ಸರ್ಕಾರ. ಮುಖ್ಯಮಂತ್ರಿಗಳು ಮಾತ್ರ ಅಲ್ಲ,  ಪೇಜಾವರ ಸ್ವಾಮೀಜಿಗಳು ಅದನ್ನೇ ಹೇಳಿದ್ದಾರೆ. ಯುದ್ಧ ಅಗತ್ಯ ಇದೆಯೋ ಇಲ್ಲವೋ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ

ಕೆ.ಜಯಪ್ರಕಾಶ್‌ ಹೆಗ್ಡೆ (ಮಾಜಿ ಸಚಿವರು)

Related Articles

LEAVE A REPLY

Please enter your comment!
Please enter your name here

Stay Connected

642FansLike
81FollowersFollow
17SubscribersSubscribe
- Advertisement -spot_img

Latest Articles