ಉಡುಪಿ: ಕಾಶ್ಮೀರದ ಪೆಹೆಲ್ಗಾಮ್ನಲ್ಲಿ ಭಯೋತ್ಪಾದಕರ ದಾಳಿಯಿಂದ ಮೃತಪಟ್ಟವರ ಸದ್ಗತಿಗಾಗಿ, ಅಭಿನವ ಭಾರತ್ ಸಂಘಟನೆಯಿಂದ ಸೋಮವಾರ ಮಲ್ಪೆಯ ಹನುಮಾನ್ ವಿಠೋಭಾ ಭಜನಾ ಮಂದಿರದ ಹೊರಭಾಗದಲ್ಲಿ “ಗೀತಾ ತ್ರಿಷ್ಟುಪ್ ಹೋಮ” ನಡೆಸಿ, ಮಲ್ಪೆ ಸಮುದ್ರದಲ್ಲಿ ತಿಲತರ್ಪಣ ಬಿಡಲಾಯಿತು. ಈ ವೇಳೆ ಹೋಮದ ಆಯೋಜಕ, ಹಿಂದೂ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಮಾತನಾಡಿ, ಜಾತಿ ವ್ಯವಸ್ಥೆಯಲ್ಲಿ ಹಂಚಿಹೋದ ಹಿಂದೂ ಸಮಾಜ, ದುರ್ಬಲವಾಗಿದೆ. ಅಲ್ಪಸಂಖ್ಯಾತ ಸಮಯದಾಯಕ್ಕೆ ಹೆದರಿ ಬದುಕುವ ಪರಿಸ್ಥಿತಿ ನಿರ್ಮಾಣ ಆಗಿದ್ದು, ಹಿಂದೂ ರಾಷ್ಟ್ರದಲ್ಲಿ ಹಿಂದೂಗಳ ಹೆಸರು ಕೇಳಿ ಹತ್ಯೆ ಮಾಡುತ್ತಾರೆ. ಇದು ಘೋರ ದುರಂತ ಎಂದು ವಿಷಾದಿಸಿದರು. ಹಿಂದೂಗಳು ಭಯೋತ್ಪಾದಕರ ಕಾಟ ಇದೆ ಎಂಬ ಕಾರಣಕ್ಕೆ ಕಶ್ಮೀರಕ್ಕೆ ಹೋಗುವುದಿಲ್ಲ ಎನ್ನುವಂತಾಗಿದೆ. ಇದು ಹಿಂದೂಗಳ ದುಸ್ಥಿತಿ, ಹಿಂದೂ ಸಮಾಜದಲ್ಲಿ ಒಗ್ಗಟ್ಟಿಲ್ಲ, ಏಕತೆಯಿಲ್ಲ. ಏಕತೆ ಬರಬೇಕಾದರೆ ಒಂದೇ ಕುಟುಂಬ ಎಂಬ ಭಾವನೆ ಬರಬೇಕು. ಈ ಏಕತಾ ಭಾವನೆಗಾಗಿ ಧಾರ್ಮಿಕ ವಿಧಿವಿಧಾನ ನಡೆಸಲಾಗಿದೆ ಎಂದರು. ನಮ್ಮ ಕುಟುಂಬ ಮೃತಪಟ್ಟರೆ ಪ್ರತೀವರ್ಷ ಶ್ರಾದ್ಧ ಮಾಡುತ್ತೇವೆ. ಪ್ರತೀವರ್ಷ ಪಿತೃ ಹೆಸರಲ್ಲಿ ತರ್ಪಣ ಬಿಡುತ್ತೇವೆ. ಆದರೆ ಪೆಹಲ್ಗಾಮ್ ಘಟನೆ ನಡೆದು ಎರಡು ವಾರದಲ್ಲಿ ಸಮಾಜಕ್ಕೆ ಈ ಘಟನೆ ಮರೆತುಹೋಗಿರುವುದು ವಿಪರ್ಯಾಸ ಎಂದರು.
ಪೆಹೆಲ್ಗಾಮ್ನಲ್ಲಿ ನಡೆದ ಘಟನೆ ಬಗ್ಗೆ ಯೋಚನೆ ಮಾಡುವಂತಾಗಿದೆ. ಬಹಳಷ್ಟು ಜನರಿಗೆ ಮೃತರ ಸಂಖ್ಯೆ ಕೂಡ ನೆನಪಿಲ್ಲ.ನಾವೆಲ್ಲ ಎಚ್ಚೆತ್ತುಕೊಂಡು ಇಂತಹ ಘಟನೆಗಳಿಗೆ ತಕ್ಕ ಉತ್ತರ ನೀಡಬೇಕಿದೆ. ಧಾರ್ಮಿಕವಾಗಿ ಸಮಾಜವನ್ನ ಹೇಗೆ ಒಗ್ಗೂಡಿಸಬಹುದೆಂದು ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದರು. ವೇದಮೂರ್ತಿ ಸುರಾಲು ತಂತ್ರಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ಉದ್ಯಮಿ ಅಜಯ್ ಕೊಡವೂರು, ಹಿಂದೂ ಮುಖಂಡ ಪಾಂಡುರಂಗ ಮಲ್ಪೆ, ನಗರಸಭಾ ಸದಸ್ಯ ವಿಜಯ್ ಕೊಡವೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಭಗವದ್ಗೀತೆಯಲ್ಲಿ ಬರುವ ಶ್ರೀ ಕೃಷ್ಣನ ಮಾತು ಗೀತಾ ತ್ರಿಷ್ಟುಪ್. ಗೀತಾ ತ್ರಿಷ್ಟುಪ್ ಮಂತ್ರದಿಂದ ಸಾವಿರ ಸಂಖ್ಯೆಯ ಜಪ ಮಾಡಿ ಹೋಮ ನಡೆಸಲಾಗಿದೆ. ಮೃತ 25 ಮಂದಿಯ ಪರವಾಗಿ 25 ಕಾರ್ಯಕರ್ತರು ತಿಲತರ್ಪಣ ಬಿಟ್ಟು ಸಮುದ್ರದಲ್ಲಿ ಆತ್ಮ ಶಾಂತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ಇದು ಎಲ್ಲಾ ಕಡೆಯಲ್ಲೂ ಆಯೋಜನೆ ಆಗಬೇಕು.
ಶ್ರೀಕಾಂತ್ ಶೆಟ್ಟಿ ಕಾರ್ಕಳ
ಹೋಮದ ಆಯೋಜಕ.