ಉಡುಪಿ : ಪರ್ಕಳಪೇಟೆ ಬಾಬುರಾಯ ಸರ್ಕಲ್ ಹತ್ತಿರ ಪಾಟೀಲ್ ಕ್ಲೊತ್ ಸ್ಟೋರ್ ಎದುರುಗಡೆಯ ಜನನಿಬಿಡ ಪ್ರದೇಶದಲ್ಲಿ ನಡೆಯುತ್ತಿರುವ ಉಡುಪಿ ನಗರಸಭೆಯ ವಾರಾಹಿ ಕುಡಿಯುವ ನೀರಿನ ಯೋಜನೆ ಕಾಮಗಾರಿ ನಿರ್ಲಕ್ಷ್ಯಕ್ಕೆ ಒಳಗಾಗಿ ಬೆಳಿಗ್ಗೆ ಒಂದು ಗೆರ್ಸಿ ದನ ಹೊಂಡಕ್ಕೆ ಬಿದ್ದ ಘಟನೆ ನಡೆದಿದೆ.

ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆಗೆ ಹಾದುಹೋಗುತ್ತಿದ್ದ ಗೆರ್ಸಿ ದನ ಆ ಹೊಂಡದಲ್ಲಿ ಬಿದ್ದಿದ್ದು, ಸ್ಥಳೀಯರು ತಕ್ಷಣ ಸ್ಪಂದಿಸಿ ರಕ್ಷಣೆ ಕಾರ್ಯಾಚರಣೆ ಕೈಗೊಂಡರು. ಮೇಸ್ತ್ರಿ ವಿಠಲ್ ನಾಯ್ಕ್ ಕೋಡಂಗೆ, ರಾಮ ಮೇಸ್ತ್ರಿ, ರಿಕ್ಷಾ ಚಾಲಕರು ಸುಧೀರ ನಾಯ್ಕ್, ಸತೀಶ ನಾಯ್ಕ್, ಉಮೇಶ್ ನಾಯ್ಕ್, ಸತ್ಯನಾರಾಯಣ ಮುಂತಾದವರು ತಕ್ಷಣ ಸಹಾಯಕ್ಕೆ ಧಾವಿಸಿ, ಬಳಿಕ ಜೆಸಿಬಿ ಯಂತ್ರದ ಸಹಾಯದಿಂದ ದನವನ್ನು ಸುರಕ್ಷಿತವಾಗಿ ಮೇಲಕ್ಕೆ ಎತ್ತಿದರು.

ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳೇಬೇಟ್ಟು ಅವರು ಕಾಮಗಾರಿ ಎರಡು ತಿಂಗಳಿಗೂ ಹೆಚ್ಚು ಕಾಲ ವಿಳಂಬವಾಗಿದೆ. ಯಾವುದೇ ಭದ್ರತಾ ಕ್ರಮಗಳಿಲ್ಲದೆ ಕಾರ್ಯ ಮುಂದುವರಿಸುವುದು ಸಂಬಂಧಪಟ್ಟ ಇಲಾಖೆಯ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಖಂಡಿಸಿದರು.

ಸೆಪ್ಟೆಂಬರ್ 4ರಂದು ಪ್ರಾರಂಭವಾದ ಈ ಕಾಮಗಾರಿಯಲ್ಲಿ ಕಾಂಕ್ರೀಟ್ ರಸ್ತೆ ಒಡೆದು ಪೈಪ್ ಜೋಡಣೆ ಕಾರ್ಯ ಆರಂಭವಾದರೂ, ಅದು ಆಮೆಗತಿಯಲ್ಲಿ ನಡೆಯುತ್ತಿದ್ದು, ಸುತ್ತಮುತ್ತ ಭದ್ರತಾ ಬೇಲಿ ಅಥವಾ ಎಚ್ಚರಿಕಾ ಸೂಚನೆಗಳ ಕೊರತೆಯಿಂದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಕೂಡ ಇದೇ ರೀತಿಯ ಅಪಘಾತಗಳು ಪುನರಾವರ್ತನೆ ಆಗದಂತೆ ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.



